ಆಳ್ವಾಸ್‍ನಿಂದ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಉಚಿತ ನೇತ್ರ ತಪಾಸಣಾ ಶಿಬಿರ 

ಮೂಡುಬಿದಿರೆ : ನಮ್ಮ ದೇಹದ ಎಲ್ಲಾ ಅಂಗಗಳು ಪ್ರಾಮುಖ್ಯತೆಯನ್ನು ಹೊಂದಿದ್ದು ಅದರಲ್ಲೂ ಕಣ್ಣು ಎಲ್ಲದಕ್ಕಿಂತಲೂ ಬಹಳ ಮುಖ್ಯ ವಾದುದು. ಕಣ್ಣಿನ  ಸಮಸ್ಯೆಗೆ ಶೇ 90ರಷ್ಟು ಪರಿಹಾರ ಕಲ್ಪಿಸಲು ನಮ್ಮ ದೇಶ ಹಾಗೂ ತಜ್ಞ ವೈದ್ಯರು ಶಕ್ತರಾಗಿದ್ದಾರೆ. ಆದರೆ  ಮೂಢನಂಬಿಕೆಗಳಿಂದ ಹೊರಬಂದು ಸೂಕ್ತ ಕಾಲದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಈ ಚಿಕಿತ್ಸಾ ಶಿಬಿರದ ರೂವಾರಿ ಡಾ.ಎಂ.ಮೋಹನ ಆಳ್ವ ಸಲಹೆ ನೀಡಿದರು.


 ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆದಿ ದ್ರಾವಿಡ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಸಮಗಾರ ಸಮಾಜ, ಮರಾಟಿ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಪಾಣಾರ ಅಜಿಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲಾ ಪರವನ್ ಸಮಾಜ ಸುಧಾರಕರ ಸಂಘ(ರಿ.) ಹಂಡೆಲು, ಪುತ್ತಿಗೆ ಮೂಡುಬಿದಿರೆ, ಮುಗೇರ ಸಮುದಾಯ ಮತ್ತು ಕೊರಗ ಸಮುದಾಯ  ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

 ಕಣ್ಣು ಸರಿ ಇದ್ದರೆ, ಜಗತ್ತನ್ನು ಹಾಗೂ ಜೀವನವನ್ನು ಬಹಳ ಸುಂದರವಾಗಿ ನಮಗೆ ಕಾಣಲು ಸಾಧ್ಯ. ಆದ್ದರಿಂದ ಕಣ್ಣಿಗೆ ನಾವು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು ಇದು ನಮ್ಮ ಕರ್ತವ್ಯ. ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು. 


ಸಮಗಾರ ಸಮಾಜ ಸಂಘದ ಗೌರವಾಧ್ಯಕ್ಷ ಹರೀಶ್ ಎಂ.ಕೆ, ಪರವ ಸಮುದಾಯದ ಅಧ್ಯಕ್ಷ ನಾರಾಯಣ ಮಾಂಟ್ರಾಡಿ, ದಲಿತ ಸಮುದಾಯದ ದ.ಕ.ಜಿಲ್ಲಾ ಗೌರವಾಧ್ಯಕ್ಷ ಅಚ್ಯುತ ಸಂಪಿಗೆ, ಆದಿದ್ರಾವಿಡ ಸಮುದಾಯದ ಯಂ.ಶೀನ, ಮರಾಠಿ ಸಮುದಾಯದ ಗೌರವಾಧ್ಯಕ್ಷ ರಾಮಚಂದ್ರ ಕೆಂಬಾರೆ, ಪಾಣರ ಅಜಿಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ  ಎನ್ .ಕೆ.ಸಾಲಿಯಾನ್,  ಪ್ರಸಾದ್ ನೇತ್ರಾಲಯದ ಡಾ.ಅಶ್ವಿನ್, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ  ಪ್ರಾಂಶುಪಾಲ ಡಾ.ಸಜಿತ್‍ಎಂ, ಪತ್ರಕರ್ತ ಬೆಳವಾಯಿ ಸೀತರಾಮ್ ಆಚಾರ್ಯ, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಮರಾಠಿ ಸಮುದಾಯದ ಪ್ರಕಾಶ್ ನಾಯ್ಕ್  ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ. ನಮೃತಾ ಕುಲಾಲ್ ನಿರೂಪಿಸಿ,  ರವೀಶ್ ಎನ್. ಕೆ. ವಂದಿಸಿದರು.

---------------+

 ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 225 ಜನರು ಪಾಲ್ಗೊಂಡಿದ್ದರು. 151 ಕನ್ನಡಕ, 24 ಜನರು ಶಸ್ತ್ರ ಚಿಕಿತ್ಸೆಗೆ ನೋಂದಾಯಿಸಿಕೊಂಡರು. ಇಲ್ಲಿವರೆಗೆ ನಡೆದ ಒಟ್ಟು ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 797 ಜನರು ಪಾಲ್ಗೊಂಡು 434 ಜನರು ಕನ್ನಡಕ ಪಡೆದರೆ ಹಾಗೂ 110 ಜನರು  ಶಸ್ತ್ರ ಚಿಕಿತ್ಸೆಗೆ ಹೆಸರು ನೋಂದಾಯಿಸಿ, 29 ಜನರು ಶಸ್ತ್ರ ಚಿಕಿತ್ಸೆಯ ಅವಕಾಶವನ್ನು ಪಡೆದುಕೊಂಡರು.