ಮಾರೂರು-ಹೊಸಂಗಡಿ ಶ್ರೀಗೋಪಾಕೃಷ್ಣ ದೇವಳಕ್ಕೆ ಶಿಲಾನ್ಯಾಸ
ಮೂಡುಬಿದಿರೆ: ಶ್ರೀ ಗೋಪಾಕೃಷ್ಣ ದೇವಸ್ಥಾನ ಮಾರೂರು-ಹೊಸಂಗಡಿ ಇದರ ಜೀರ್ಣೋದ್ಧಾರ ಪ್ರಯುಕ್ತ ಬುಧವಾರ ನೂತನ ಗರ್ಭಗುಡಿಗೆ ಶಿಲಾನ್ಯಾಸ ನಡೆಯಿತು.
ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿ ದೇವಸ್ಥಾನಗಳ ನಿರ್ಮಾಣ, ಧಾರ್ಮಿಕ ಆಚರಣೆಗಳಿಂದ ನಮ್ಮ ಅಂತ:ಕರಣದಲ್ಲಿ ದೇವರ ಮೇಲಿನ ಶ್ರದ್ಧೆ, ಭಕ್ತಿ ವೃದ್ಧಿಸುತ್ತದೆ' ಎಂದು ಹೇಳಿದರು.
ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರು ತಮ್ಮ ಸಂಪತ್ತಿನ ಒಂದಂಶವನ್ನು ಧರ್ಮಕಾರ್ಯಗಳಿಗೆ ಉಪಯೋಗಿಸುವ ಮೂಲಕ ಧರ್ಮದ ಪುನರುತ್ಥಾನ ಕಾರ್ಯದಲ್ಲಿ ಕೈಜೋಡಿಸಬೇಕು. ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಕ್ಷೇತ್ರದ ಭಕ್ತರು ಸುಧಾಮನ ನಿಷ್ಕಳಂಕ ಮನಸ್ಸಿನಂತೆ ರಾಮನ ಭಕ್ತ ಹನುಮಂತನ ಸ್ವಾಮಿನಿಷ್ಠೆಯಂತೆ ಕೆಲಸ ಮಾಡಿದಾಗ ನಿಗದಿತ ಅವಧಿಯಲ್ಲಿ ದೇವತಾ ಕಾರ್ಯಗಳು ಪೂರ್ಣಗೊಳ್ಳುವುದರಲ್ಲಿ ಸಂಶಯ ಇಲ್ಲ ಎಂದರು.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಹೊಸಂಗಡಿ ಅರಮನೆಯ ಆಡಳಿತ ಮೊಕ್ತೇಸರ ಸಂಪತ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾರ್ಗದರ್ಶಕರಾದ ಜೀವಂಧರ್ ಕುಮಾರ್, ಕಾಂಗ್ರೆಸ್ ಮುಖಂಡ ಮಿಥುನ್ ರೈ, ತೋಡಾರು ದಿವಾಕರ ಶೆಟ್ಟಿ, ಭೋಜ ಶೆಟ್ಟಿ ಮಾರೂರುಗುತ್ತು, ಉದ್ಯಮಿ ಸುಧೀರ್ ಹೆಗ್ಡೆ ಬೈಲೂರು, ಕ್ಷೇತ್ರದ ಪ್ರಧಾನ ಅರ್ಚಕ ವೆಂಕಟ್ರಾಜ ಅಸ್ರಣ್ಣರು, ಎಸ್ಕೆಡಿಆರ್ಡಿಪಿಯ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್ ಸ್ವಾಗತಿಸಿದರು. ಕೊಕ್ರಾಡಿ ಅಜಿತ್ ಕುಮಾರ್ ನಿರೂಪಿಸಿ ಸುಶಾಂತ್ ಕರ್ಕೇರ ವಂದಿಸಿದರು.
0 Comments