ಮೂಡುಬಿದಿರೆ: ರೋಟರಿಯಂತಹ ಸಂಘಟನೆ ಬಲಯುತವಾಗಿ ಬೆಳೆಯ ಬೇಕಾದರೆ ಇದರಲ್ಲಿ ಯುವಕರ ಸೇರ್ಪಡೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಕಾಲಕ್ಕೆ ಸರಿಯಾಗಿ ಆಗುವ ಬದಲಾವಣೆಗಳನ್ನು ಸ್ವೀಕರಿಸಿ, ಧೈರ್ಯದಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ರೋಟರಿ ಜಿಲ್ಲೆ 3181 ಇದರ ಮಾಜಿ ರಾಜ್ಯಪಾಲ ರೊ. ರಂಗನಾಥ ಭಟ್ ಹೇಳಿದರು.
ಅವರು ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಇದರ 2026-27ನೇ ಸಾಲಿನ ಅಧ್ಯಕ್ಷ ಮುರಳೀಧರ ಕೋಟ್ಯಾನ್ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ ಸಭಾಭವನದಲ್ಲಿ ಶುಕ್ರವಾರ ಸಂಜೆ ನೆರವೇರಿಸಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮುರಳೀಧರ ಕೋಟ್ಯಾನ್ ಅವರು ಮಾತನಾಡಿ ಕಳೆದ ಸಾಲಿನಲ್ಲಿ ಮಾರೂರಿನ ಹೃದ್ರೋಗ ಪೀಡಿತ ಉತ್ತಮ ಕುಶಲಕರ್ಮಿಯೊಬ್ಬರ ಕುಟುಂಬಕ್ಕೆ ದಾನಿಗಳ ನೆರವಿನಿಂದ ಸುಮಾರು ರೂ. 6.50 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಂದರವಾದ ಮನೆಯನ್ನು ತಮ್ಮ ಅಧ್ಯಕ್ಷತೆಯ ಪ್ರಾರಂಭದಲ್ಲೇ ಹಸ್ತಾಂತರಿಸಲಾಗಿದ್ದು ಈ ವರ್ಷವೂ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಅದನ್ನು ಹಸ್ತಾಂತರಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ವಲಯದ ಅಸಿಸ್ಟೆಂಟ್ ಗವರ್ನರ್ ಜೋಯೆಲ್ ಡಿಸೋಜ,ವಲಯ ಸೇನಾನಿ ವಿದೇಶ್ ಎಂ. ಶುಭ ಹಾರೈಸಿದರು.
ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ಸೇವಾ ಕಾರ್ಯಗಳಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳನ್ನು ತಿಳಿಸಿದರು.
ಸಮಾಜಸೇವಾ ಕಾರ್ಯಕ್ರಮದ ಅಂಗವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನೆಲ್ಲಿಕಾರಿನ ವಿದ್ಯಾ, ಪ್ರೀತೇಶ್ ಶೆಟ್ಟಿ ದರೆಗುಡ್ಡೆ, ನೀರ್ಕೆರೆಯ ಜಾಹ್ನವಿ ಹಾಗೂ ದರೆಗುಡ್ಡೆಯ ಸಮರ್ಥ್ ಪಾಟೀಲ್ ಅವರಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕ್ಲಬ್ ಸದಸ್ಯರಾದ ಪುಷ್ಪರಾಜ್ ಜೈನ್ ಮತ್ತು ಸುಶಾಂತ್ ಕರ್ಕೇರಾ ಅವರು ನೀಡಿರುವ ಪ್ರೋತ್ಸಾಹ ಧನವನ್ನು ಶಿಕ್ಷಕ ಕಿರಣ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
ಬಿ.ಎಸ್.ಸಿ. ಬ್ಯೂರೋ ಸೈನ್ಸ್ ಸಾಧಕರಾದ ಕು. ನಿತ್ಯಶ್ರೀ ಮತ್ತು ಪ್ರಶಾಂತ್ ಕೋಟ್ಯಾನ್ ಅವರನ್ನು ಪುರಸ್ಕರಿಸಲಾಯಿತು. ಕಳೆದ ಸಾಲಿನಲ್ಲಿ ಅತ್ಯುತ್ತಮ ಸೇವಾಕಾರ್ಯ ನಡೆಸಿಕೊಟ್ಟ ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ ಮತ್ತು ಸದಸ್ಯ ಕುಮಾರ್ ಪೂಜಾರಿಯವರನ್ನು ಗೌರವಿಸಲಾಯಿತು. ಪವನ್ ಕುಮಾರ್ ಜೈನ್, ಜೋನ್ ಡಿಸೋಜ ಮತ್ತು ಅವಿನಾಶ್ ಶೆಟ್ಟಿಯವರನ್ನು ಹೊಸ ಸದಸ್ಯರಾಗಿ ಸೇರ್ಪಡೆ ಮಾಡಲಾಯಿತು. ಪುಷ್ಪರಾಹ್ ಜೈನ್, ಕುಮಾರ್ ಪೂಜಾರಿ ಮತ್ತು ಸುಶಾಂತ್ ಕರ್ಕೇರಾ ಅತಿಥಿಗಳನ್ನು ಪರಿಚಯಿಸಿದರು. ಪ್ರಶಾಂತ್ ಭಂಡಾರಿ ಮತ್ತು ಮಹೇಂದ್ರ ಕುಮಾರ್ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಪರಿಚಯಿಸಿದರು. ಪದ್ಮಾವತಿ ಶೆಟ್ಟಿ ಮತ್ತು ರೇಖಾ ಭಂಡಾರಿ ಪ್ರಾರ್ಥನೆ ನೆರವೇರಿಸಿದರು. ಕರುಣಾಕರ ದೇವಾಡಿಗ ಸ್ವಾಗತಿಸಿದರು. ಪ್ರಶಾಂತ್ ಭಂಡಾರಿ ಕಾಯ೯ಕರಮ ನಿರೂಪಿಸಿದರು. ಅಭಿನಂದನ್ ಬಲ್ಲಾಳ್ ವಂದಿಸಿದರು.


0 Comments