ಸದಾಶಿವ ಆಯೋಗ, ಕಾಂತರಾಜು ಆಯೋಗ ಜಾರಿಗೊಳಿಸಲು ಆದಿದ್ರಾವಿಡ ಸಮಾಜ ಸೇವಾ ಸಂಘದ ವಿರೋಧ

 ಸದಾಶಿವ ಆಯೋಗ, ಕಾಂತರಾಜು ಆಯೋಗ ಜಾರಿಗೊಳಿಸಲು ಆದಿದ್ರಾವಿಡ ಸಮಾಜ ಸೇವಾ ಸಂಘದ ವಿರೋಧ


ಮೂಡುಬಿದಿರೆ: ನಿವೃತ್ತ ನ್ಯಾಯಮೂರ್ತಿ ಸದಾಶಿವ  ಆಯೋಗ ಸಿದ್ಧಪಡಿಸಿದ ಜಾತಿಗಣತಿ ವರದಿ ಅವೈಜ್ಞಾನಿಕವಾಗಿದ್ದು ಈ ವರದಿಯನ್ನು ಜಾರಿಗೊಳಿಸುವುದಕ್ಕೆ ನಮ್ಮ ವಿರೋಧ ಇದೆ ಎಂದು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಗೌರವ ಅಧ್ಯಕ್ಷ ಶೀನ ಮಾಸ್ತಿಕಟ್ಟೆ ಹೇಳಿದರು.

ಜಿಲ್ಲಾ ಘಟಕದ ವತಿಯಿಂದ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದಾಶಿವ ಆಯೋಗ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಪರಿಶಿಷ್ಟ ಜಾತಿ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಚಾರಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸದೆ ವರದಿಯನ್ನು ಸಿದ್ಧಪಡಿಸದೆ. ಈ ವರದಿಯನ್ನು ಸಿದ್ಧರಾಮಯ್ಯ ಸರಕಾರ ಜಾರಿಗೊಳಿಸಿದರೆ ಆದಿ ದ್ರಾವಿಡ ಸಮಾಜಕ್ಕೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.

2015 ರಲ್ಲಿ ಹಿಂದುಳಿದ ಆಯೋಗದ ಆಗಿನ ಅಧ್ಯಕ್ಷ ಕಾಂತರಾಜು ಆಯೋಗ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಹಿಂದುಳಿದ ಜಾತಿ ಗೆ ೪೫೦ ಹೊಸ ಜಾತಿಗಳನ್ನು ಸೇರಿಸಿ ಪರಿಶಿಷ್ಟ ಜಾತಿಯ ಮೀಸಲಾತಿ ಇತರ ಜಾತಿಗಳಿಗೂ ಹಂಚಿ ಹೋಗುವ ಅವಕಾಶ ಕಲ್ಪಿಸಿದೆ. ಇಲ್ಲು ಆದಿದ್ರಾವಡಿರಿಗೆ ಅನ್ಯಾಯವಾಗಿದೆ. ದ.ಕ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಆದಿ ದ್ರಾವಿಡ ಸಮಾಜದವರಿದ್ದರೂ ಕೇವಲ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನಮಗೆ ರಾಜಕೀಯ ಮೀಸಲಾತಿ ಸಿಕ್ಕಿದೆ. ಜಿಲ್ಲೆಯ ಇತರ ವಿಧಾನಸಭೆ ಕ್ಷೇತ್ರಗಳಲ್ಲು ಎಂಎಲ್‌ಎ ಚುನಾವಣೆಗೆ ಸ್ಪರ್ಧಿಸಲು ಮೀಸಲಾತಿ ಅವಕಾಶ ಸಿಗಬೇಕು. ಇದರ ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿ ಸ್ಥಾನಮಾನ ಸಿಗಬೇಕಾದರೆ ಸದಾಶಿವ  ಆಯೋಗ ಮತ್ತು ಕಾಂತರಾಜು ಆಯೋಗದ ಸಮೀಕ್ಷೆ ಸಮಗ್ರ ರೀತಿಯಲ್ಲಿ ನಡೆಯಬೇಕು. ಇವುಗಳನ್ನು ಈಗಿರುವ ಸ್ಥಿತಿಯಲ್ಲಿ ಜಾರಿಗೊಳಿಸುವುದಕ್ಕೆ ನಮ್ಮ ವಿರೋಧ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಪಾಳ್ಯ ಮತ್ತು ಗ್ರಾಮಾಂತರ ಸಮಿತಿ ಅಧ್ಯಕ್ಷ ವಸಂತ ಉಪಸ್ಥಿತರಿದ್ದರು.

Post a Comment

0 Comments

Advertisement