ತುಳು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಪ್ರೀತಿ ಇರಲಿ: ಬಾಹುಬಲಿ ಪ್ರಸಾದ್

ಜಾಹೀರಾತು/Advertisment
ಜಾಹೀರಾತು/Advertisment

 ತುಳು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಪ್ರೀತಿ ಇರಲಿ: ಬಾಹುಬಲಿ ಪ್ರಸಾದ್ 



ಮೂಡುಬಿದಿರೆ :ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನದ ಜೊತೆ ಸಂಘಟನಾತ್ಮಕವಾಗಿ ಒಂದುಗೂಡಿದರೆ ಯಾವುದೇ ಕಾರ್ಯದಲ್ಲಿಯೂ ಯಶಸ್ಸು ಪಡೆದುಕೊಳ್ಳಲು ಸಾಧ್ಯ. ಮೂಡುಬಿದಿರೆ ತುಳುಕೂಟದ ಸದಸ್ಯರು ಈ ನಿಟ್ಟಿನಲ್ಲಿ ಮಾಡಿದ ಸಾಧನೆ ಪ್ರಶಂಸನೀಯವಾದುದು  ಎಂದು ಹಿರಿಯ ವಕೀಲರು ಹಾಗೂ ಮೂಡುಬಿದಿರೆ ತುಳುಕೂಟದ ಗೌರವಾಧ್ಯಕ್ಷರೂ ಆಗಿರುವ ಎಂ. ಬಾಹುಬಲಿ ಪ್ರಸಾದ್ ಹೇಳಿದರು.


ಅವರು ಅಖಿಲ ಭಾರತ ತುಳು ಒಕ್ಕೂಟ(ರಿ.) ಮಂಗಳೂರು ಇದರ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ‘ಜಾನಪದ ಉಚ್ಛಯ – ೨೦೨೪ ನಮ್ಮ ತುಳುನಾಡ್ ಕಲಾ ಪಂಥ’ ಸ್ಪರ್ಧೆಯಲ್ಲಿ ಐವತ್ತು ಸಾವಿರ ನಗದಿನೊಂದಿಗೆ ಪ್ರಥಮ ಸ್ಥಾನವನ್ನು ಪಡೆಯಲು ಕಾರಣೀಕರ್ತರಾಗಿರುವ ನಿರ್ದೇಶಕ "ಪ್ರಶಾಂತ್ ಕೈಕಂಬ" ಅವರನ್ನು ಮತ್ತು ಕಲಾವಿದರನ್ನು ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ  ಅಭಿನಂದಿಸಿ ಮಾತನಾಡಿದರು. ತುಳುಕೂಟದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಅವರು 

ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರದರ್ಶನದಲ್ಲಿ ಪಾಲ್ಗೊಂಡ ಮೂವತ್ತಕ್ಕೂ ಹೆಚ್ಚಿನ ಸದಸ್ಯರು ಮತ್ತು ಕಲಾವಿದರನ್ನು ಪ್ರಮಾಣಪತ್ರದೊಂದಿಗೆ ಗೌರವಿಸಿದರು.

 ತುಳುಕೂಟದ ಅಧ್ಯಕ್ಷ ಹಂಡೇಲುಗುತ್ತು ಧನಕೀರ್ತಿ ಬಲಿಪ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಒಗ್ಗಟ್ಟಿನಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರನ್ನು, ಸಹಕರಿಸಿದ ಸರ್ವರನ್ನೂ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಈಗಾಗಲೇ ಇದರ ಪ್ರದರ್ಶನಕ್ಕೆ ಹಲವು ಕಡೆಗಳಿಂದ ಬೇಡಿಕೆ ಬಂದಿದ್ದು ಮುಂದೆ ಪ್ರದರ್ಶನ ನೀಡುವಲ್ಲಿ ಎಲ್ಲರ ಸಹಕಾರ ನಿರೀಕ್ಷಿಸುವುದಾಗಿಯೂ ತಿಳಿಸಿದರು. 

ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿ ಕೆ.ವೇಣುಗೋಪಾಲ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಕು| ನಿಷ್ಕಾ ರೈ ಪ್ರಾರ್ಥಿಸಿದರು.  ಚೇತನಾ ಹೆಗ್ಡೆ  ಕಾರ್ಯಕ್ರಮ ನಿರೂಪಿಸಿದರು.  ಜಿನೇಂದ್ರ ಹೆಗ್ಡೆ ವಂದಿಸಿದರು.

Post a Comment

0 Comments