ಆಳ್ವಾಸ್ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಪಡೆಯಲು ಪ್ರವೇಶ ಪರೀಕ್ಷೆ ಬರೆದ ರಾಜ್ಯದ 15986 ವಿದ್ಯಾರ್ಥಿಗಳು
ಮೂಡುಬಿದಿರೆ : ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಭಾನುವಾರದಂದು ಪ್ರವೇಶ ಪರೀಕ್ಷೆ ನಡೆಸಿದ್ದು ನಾಡಿನ ಮೂಲೆ ಮೂಲೆಯಿಂದ ವಿದ್ಯಾಗಿರಿಗೆ 15986 ಹೆಚ್ಚಿನ ವಿದ್ಯಾರ್ಥಿಗಳು ಅವರ ಪೋಷಕರು, ಜತೆಗೂಡಿ ಆಗಮಿಸಿ ವಿದ್ಯಾಗಿರಿ ಮತ್ತು ಪುತ್ತಿಗೆಯಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ.
ಪ್ರತೀ ವರ್ಷದಂತೆ ಈ ಬಾರಿಯೂ ತನ್ನ ಕನಸಿನ ನಾಡಿನ ಏಕೈಕ ಶೂನ್ಯ ಶುಲ್ಕದ ಕನ್ನಡ ಮಾಧ್ಯಮ ಶಾಲೆಗೆ ಉಚಿತ ದಾಖಲಾತಿ ಕೋರಿ ಹೊರಡಿಸಿದ್ದ ಪ್ರಕಟಣೆಗೆ ಸ್ಪಂದಿಸಿ ಬಂದಿದ್ದ ಅರ್ಜಿಗಳು
ಈ ಪೈಕಿ ಹಾಜರಾಗಿ ಪರೀಕ್ಷೆ ಬರೆದು ದಾಖಲಾತಿ ಪ್ರಕ್ರಿಯೆ ಮುಗಿಸಿ ಮುಗಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ನಿನ್ನೆಯೇ ವಿದ್ಯಾಗಿರಿಗೆ ಆಗಮಿಸಿದ್ದು ಬೆಳಗಿನ ವೇಳೆ ಕ್ಯಾಂಪಸ್ ನ ಸುತ್ತಲೂ ಪುಟ್ಟ ಮಕ್ಕಳು ಮತ್ತು ಅವರ ಹೆತ್ತವರು ತುಂಬಿ ಹೋಗಿದ್ದರು. ಇದನ್ನೆಲ್ಲಾ ಗಮನಿಸಿದಾಗ ಹೆತ್ತವರಿಗೆ ಕನ್ನಡ ಮಾಧ್ಯಮದ ಬಗ್ಗೆ ಇರುವ ಒಲವು ಬಗ್ಗೆ ಎದ್ದು ಕಾಣುತ್ತಿತ್ತು.
ಬಂದವರಿಗೆಲ್ಲ ವಸತಿ, ಸುಧಾರಿಕೆಗೆ ವ್ಯವಸ್ಥೆ ಒದಗಿಸಿದ್ದರೂ ಹೆಚ್ಚಿನ ಪೋಷಕರು, ಬಂದಿದ್ದವರು ವಿದ್ಯಾಗಿರಿಯ ಪರೀಕ್ಷಾ ಕೇಂದ್ರಗಳ ಕಟ್ಟಡದ ಹೊರ ಭಾಗದಲ್ಲಿ ವಿಶಾಲ ರಾಜ ಬೀದಿ, ಹಸಿರ ಮಡಿಲ ಆವರಣದಲ್ಲಿ ಕಟ್ಟಡ,ಉದ್ಯಾನವನದ ನೆರಳಲ್ಲಿ ದಣಿವಾರಿಸಿಕೊಳ್ಳುತ್ತಿದ್ದ, ಲಗ್ಗೇಜುಗಳ ರಾಶಿ ನಡುವೆ ನಿದ್ದೆಗೆ ಜಾರಿದ್ದ ನೋಟಗಳು, ಸಹಸ್ರಾರು ವಾಹನಗಳು ತುಂಬಿಕೊಂಡಿತ್ತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ರಾಜ್ಯದ ನಂ. ೧ ಕನ್ನಡ ಮಾಧ್ಯಮ ಶಾಲೆಯಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ೨೦೨೪-೨೫ನೇ ಸಾಲಿನ, ೬ರಿಂದ ೯ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆ ಇದಾಗಿದೆ.
ರಾಜ್ಯಾದ್ಯಂತ ೩೨ ಶೈಕ್ಷಣಿಕ ಜಿಲ್ಲೆಗಳ 19224 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 15986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 11795, 7ನೇ ತರಗತಿಗೆ 1438, 8ನೇ ತರಗತಿಗೆ 1889 ಹಾಗೂ 9 ನೇ ತರಗತಿಗೆ 684 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 5237 ವಿದ್ಯಾರ್ಥಿಗಳು, ಬಾಗಲಕೋಟೆ ಹಾಗೂ ವಿಜಯಪುರದಿಂದ ಕ್ರಮವಾಗಿ 2783 ಹಾಗೂ 1554 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಇದೇ ದಿನ ಸರಕಾರದ ಆದರ್ಶ ಶಾಲೆಗಳ ಪ್ರವೇಶ ಪರೀಕ್ಷೆ ಇದ್ದ ಕಾರಣ ಕೆಲವರಿಗೆ ಆಳ್ವಾಸ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.
ಕಳೆದ ವರ್ಷದವರೆಗೆ ಕೈಬರಹದಲ್ಲಿ ಸಲ್ಲಿಕೆಯಾಗುತ್ತಿ ದ್ದು, ಪ್ರತಿಭಾನ್ವಿತ ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಆನ್ಲೈನ್ನಲ್ಲಿ ಅರ್ಜಿ ನಮೂನೆಯನ್ನು ಕ್ಯೂಆರ್ ಕೋಡ್ ಸಹಿತವಾಗಿ ವ್ಯವಸ್ಥೆಗೊಳಿಸಿಲಾಗಿತ್ತು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಿದ್ದರಿಂದ 7 ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ವಿದ್ಯಾಗಿರಿ ಹಾಗೂ ಪುತ್ತಿಗೆ ಕ್ಯಾಂಪಸ್ನ ಯಶೋಕಿರಣ ಬ್ಲಾಕ್, ಆಳ್ವಾಸ್ ಪದವಿ ಪೂರ್ವ ವಿಭಾಗದ ಬಿ ಬ್ಲಾಕ್, ಕಾಮರ್ಸ್ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು, ನುಡಿಸಿರಿ ವೇದಿಕೆಯ ಸ್ಟಡಿ ಹಾಲ್, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲೂ ಪ್ರವೇಶ ಪರೀಕ್ಷೆ ನಡೆಸಲಾಗಿದೆ.
೬ ಮತ್ತು ೭ನೇ ತರಗತಿಯವರೆಗೆ ಎಲ್ಲಾ ಪಠ್ಯ ವಿಷಯಗಳು ಸೇರಿದಂತೆ ತಾರ್ಕಿಕ ಸಾಮರ್ಥ್ಯ ಆಧಾರಿತವಾಗಿ ೧೨೦ ಅಂಕಗಳಿಗೆ ೨ ಗಂಟೆಯ ಪರೀಕ್ಷೆ ನಡೆದಿದ್ದು, ೮ ಮತ್ತು ೯ನೇ ತರಗತಿಗೆ ಎಲ್ಲಾ ಪಠ್ಯ ವಿಷಯಗಳು ಮತ್ತು ತಾರ್ಕಿಕ ಸಾಮರ್ಥ್ಯ ಸೇರಿ ಒಟ್ಟು ೨ ಗಂಟೆ ೩೦ ನಿಮಿಷದಂತೆ ೧೫೦ ಅಂಕಗಳಿಗೆ ಪರೀಕ್ಷೆ ನಡೆದಿದೆ.
ಪ್ರಾಥಮಿಕ ಹಂತದಲ್ಲಿ ಒಎಮ್ಆರ್ ಆಧಾರಿತ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಂತೆ ಪ್ರಶ್ನೆ ಪ್ರತ್ರಿಕೆಗಳನ್ನು ಎ,ಬಿ,ಸಿ,ಡಿ ಸಿರೀಸ್ನಲ್ಲಿ ನೀಡಲಾಗಿದೆ. ವಿದ್ಯಾರ್ಥಿಯ ಚಿಂತನಾ ಸಾಮರ್ಥ್ಯವನ್ನು ಗುರುತಿಸಿದ ನಂತರ, ಸಂಸ್ಥೆ ನಿಗದಿ ಪಡಿಸಿದ ಮಾನದಂಡ ಗಳಿಸಿದವರು ಮುಖ್ಯ ಹಂತಕ್ಕೆ ಆಯ್ಕೆಯಾಗಲಿದ್ದಾರೆ. ಮುಖ್ಯ ಹಂತದಲ್ಲಿ ಬರವಣಿಗೆ ಆಧಾರಿತ ಪರೀಕ್ಷೆ ಇದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತು ಕೌಶಲ್ಯಗಳನ್ನು ಗಮನಿಸಿ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿದ್ದ ತಂಡವನ್ನು ರಚಿಸಲಾಗಿದ್ದು ಖುದ್ದು ತಂಡದ ಮುಖ್ಯಸ್ಥರಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವರವರು ಸಂದರ್ಶನವನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಮತ್ತು ಆಳ್ವಾಸ್ನ ಕಲಿಕಾ ವ್ಯವಸ್ಥೆಗಳಿಗೆ ಪೂರಕವಾಗಿರುವವರನ್ನು, ಜೊತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲಕರ ಮಕ್ಕಳಿಗೆ, ತಂದೆ ತಾಯಿಯವರನ್ನು ಕಳೆದುಕೊಂಡ ಮಕ್ಕಳಿಗೆ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ದಾಖಲಾತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಪ್ರತ್ಯೇಕ ಆಯ್ಕೆ ಶಿಬಿರಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ ಎಂದು ಡಾ. ಮೋಹನ ಆಳ್ವ ತಿಳಿಸಿದರು.
೩೦,೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಯಿತು.
ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿನಿಲಯ, ಪಠ್ಯಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸ್ಪರ್ಧಾತ್ಮಕವಾದ ಬುದ್ಧಿಮತ್ತೆ ಜತೆಗೆ ಸುಸಂಸ್ಕೃತವಾದ ಮನಸ್ಸನ್ನು ಕಟ್ಟುವ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ ೬ರಿಂದ ೧೦ನೇ ತರಗತಿಯವರೆಗೆ ೬೦೦ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ವಸತಿ, ಊಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಾರ್ಷಿಕ ಓರ್ವ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ ೧ ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದ್ದು, ಒಟ್ಟು ೭ ಕೋಟಿಗೂ ಮಿಕ್ಕು ಹಣವನ್ನು ಸಂಸ್ಥೆ ವ್ಯಯಿಸುತ್ತಿದೆ.
ಬಾಕ್ಸ್ //
ಸರಕಾರವೂ ಸ್ಪಂದಿಸಲಿ: ಡಾ. ಆಳ್ವ
ಈ ಕನ್ನಡ ಮಾಧ್ಯಮ ಮಾದರಿ ಶಾಲೆಗೆ ಕಳೆದ ಏಳು ವರ್ಷಗಳಿಂದ ಶಿಕ್ಷಣ ಇಲಾಖೆ ರಾಜ್ಯದ ನಂ1 ಶಾಲೆ ಎಂದು ಪ್ರಮಾಣಪತ್ರವನ್ನೇನೋ ನೀಡಿದೆ. ಆದರೆ ಈ ಮಾದರಿ ಯಶಸ್ವೀ ವ್ಯವಸ್ಥೆಯನ್ನು
ಪರಿಶೀಲಿಸಿ ಅಳವಡಿಸಿಕೊಳ್ಳಲು ಮುಂದಾಗಿಲ್ಲ. ಸರಕಾರವೂ ಮಾದರಿ ಶಾಲೆಗಳಲ್ಲಿ ವ್ಯಯಿಸುವ ಅನುದಾನವನ್ನು ನೀಡಿ ಮಕ್ಕಳನ್ನು ಒದಗಿಸುವ ಅವಕಾಶ ಕಲ್ಪಿಸಿದಲ್ಲಿ ಅದೆಷ್ಟೇ ಮಕ್ಕಳು ಬಂದರೂ ಅವರಿಗೂ ಮಾದರಿ ಶಿಕ್ಷಣ ವ್ಯವಸ್ಥೆ ನೀಡಲು ಬದ್ಧ ಎಂದು ಪರೀಕ್ಷಾ ವ್ಯವಸ್ಥೆಯ ಪರಿಶೀಲನೆಗೆ ಖುದ್ದು ಹಾಜರಾಗಿದ್ದ ಡಾ. ಆಳ್ವ ಪತ್ರಕರ್ತರೊಂದಿಗೆ ತಿಳಿಸಿದರು. ಆಳ್ವಾಸ್ ನಲ್ಲಿ ಮಾರ್ಚ್ ಮೊದಲ ರವಿ ವಾರ ಪ್ರ ತೀವರ್ಷವೂ ಈ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದ ಅವರು 2025ರಲ್ಲಿ ಮಾರ್ಚ್ 2 ರಂದು ಈ ಪರೀಕ್ಷೆ ನಿಗದಿಯಾಗಿದೆ ಎಂದು ಘೋಷಿಸಿದರು.
--
0 Comments