ಸ್ಪೂರ್ತಿ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಶಿಕ್ಷಕ, ರಂಗಭೂಮಿ ಕಲಾವಿದ ಇಂದು ಎಸ್. ಮಂಗಳೂರಿಗೆ ಸನ್ಮಾನ
ಮೂಡುಬಿದಿರೆ : ಇಲ್ಲಿನ ಅರಮನೆ ಬಾಗಿಲಿನಲ್ಲಿ ಸ್ಪೂರ್ತಿ ಭಿನ್ನ ಸಾಮಥ್ಯ೯ದ ಮಕ್ಕಳ ಶಾಲೆಯಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ನಾಗರಾಜ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬೆಳೆಯಲು ಶಿಕ್ಷಕರು ಕಾರಣೀಕರ್ತರಾಗಿರುತ್ತಾರೆ. ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಅವರನ್ನು ಸಲಹುತ್ತಿರುವ ಶಿಕ್ಷಕರು ನಮಗೆಲ್ಲಾ ಸ್ಫೂರ್ತಿದಾಯಕರಾಗಿದ್ದಾರೆ. ಶಿಕ್ಷಣ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸುವ ವಿವಿಧ ಸ್ಪರ್ಧೆಗಳು ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ, ರಂಗಭೂಮಿ ಕಲಾವಿದ ಇಂದು.ಎಸ್.ಮಂಗಳೂರು ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಶಿಕ್ಷಕರಿಗಾಗಿ ಮತ್ತು ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಗೂ ತನ್ನ ಶಿಷ್ಯ ಪ್ರಕಾಶ್ ಜೆ. ಶೆಟ್ಟಿಗಾರ್ ಅವರ ಸಾಧನೆಯ ಕುರಿತಾದ ಸ್ವ ರಚಿತ ಹಾಡನ್ನು ಹಾಡಿದರು
ಶಾಲೆಯ ಶಿಕ್ಷಕಿಯರನ್ನು ಮತ್ತು ಸಿಬಂದಿಗಳನ್ನು ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕಿಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
'ಕ್ರೀಡಾರತ್ನ' ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಗಾಯಕಿ ಕೃತಿಕಾ ಮಾಳ, ಕಲಾವಿದ ವೆಂಕಟೇಶ ಬಂಗೇರಾ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ಜೆ.ಶೆಟ್ಟಿಗಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಖಜಾಂಜಿ ರಮೀಝಾ ಬಾನು ವಂದಿಸಿದರು.
ಶಿಕ್ಷಕಿಯರಿಂದ ಹಳ್ಳಿಯ ಸೊಗಡು ಅನಾವರಣ : ಸಂಸ್ಥೆಯ 9 ಮಂದಿ ಶಿಕ್ಷಕಿಯರು ಸೇರಿ ತುಳು ನಾಡಿನ ಪಾರಂಪರಿಕ ವಸ್ತುಗಳು, ಔಷಧೀಯ ಗುಣಗಳಿರುವ ಗಿಡ ಮೂಲಿಕೆಗಳು, ಖಾದ್ಯಗಳು ಮತ್ತು ವಸ್ತುಗಳು, ಹಳ್ಳಿಯ ತಿಂಡಿ ತಿನಿಸುಗಳು ತಯಾರಿಸಿ ಪ್ರದರ್ಶನಕ್ಕಿಡುವ ಮೂಲಕ ಹಳ್ಳಿಯ ಸೊಗಡು ಅನಾವರಣಗೊಂಡಿತು ಮತ್ತು ಪುಷ್ಪಗುಚ್ಛಗಳು ಪ್ರದರ್ಶನಗೊಂಡಿತು.
0 Comments