ಯುವಜನತೆಗೆ ಮಾದರಿ ಈ ಅಜ್ಜಿಯ ಸ್ವಚ್ಛತಾ ಕಾರ್ಯ
ಮೂಡುಬಿದಿರೆ: ಜೋರಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಅಜ್ಜಿಯೋರ್ವರು ಕೊಡೆಯನ್ನು ಹಿಡಿದುಕೊಂಡು ಚರಂಡಿಯಲ್ಲಿ ತುಂಬಿರುವ ಕಸದ ರಾಶಿ, ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದು ಮೇಲಕ್ಕೆ ಹಾಕಿ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವಂತೆ ಮಾಡುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಯುವಜನರಿಗೆ ಮಾದರಿಯಾಗಿದ್ದಾರೆ.
ಮೂಡುಬಿದಿರೆಯ ಅಮರಶ್ರೀ ಟಾಕೀಸ್ ಬಳಿ ಲಾವಂತ ಬೆಟ್ಟು ರಸ್ತೆಯಲ್ಲಿ ಆಗಾಗ ಸದ್ದಿಲ್ಲದೇ ಸ್ವಚ್ಛತಾ ಸೇವೆಯನ್ನು ಮಾಡುತ್ತಿರುವ ಈ ಅಜ್ಜಿಯೇ ಎಪ್ಪತ್ತರ ಹರೆಯದ ಈ ಲಿಲ್ಲಿ ಲೋಬೋ ಅವರು ಮೂಲತ: ತಾಕೋಡೆಯವರು.
ಕಾಲು ನೋವಿದ್ದರೂ ಕುಂಟುತ್ತಾ ಗೆರಟೆ ಹಿಡಿದು ಚರಂಡಿಯ ಕಸವನ್ನೆತ್ತಿ ಮೇಲಕ್ಕೆ ರಾಶಿ ಹಾಕುತ್ತಾರೆ. ನೀರು ಸಲೀಸಾಗಿ ಹರಿದಾಗ ನೆಮ್ಮದಿಯ ನಗು ಸೂಸುವ ಅವರು ಈ ಅವಸ್ಥೆ ನನ್ನಿಂದ ನೋಡಲಾಗುತ್ತಿಲ್ಲ ಎನ್ನುವ ಅವರು ನಾನೇನೂ ಕಲಿತವಳಲ್ಲ. ಆದರೆ ಬೇಕಾಬಿಟ್ಟಿ ಈ ರೀತಿ ತ್ಯಾಜ್ಯ ಎಸೆದು ಅವ್ಯವಸ್ಥೆಗೆ ಕಾರಣರಾಗುವುದು ಸರಿಯಲ್ಲ ಎನ್ನುವ ಅವರನ್ನು ಪ್ರಜ್ಞಾವಂತರಾದ ನಾವು ನೋಡಿ ನಾಚಿಕೊಳ್ಳಬೇಕು.ಅಂದ ಹಾಗೆ ನಳ್ಳಿ ಒಡೆದು ನೀರು ಪೋಲಾದಾಗ, ರಸ್ತೆಯಲ್ಲಿ ತ್ಯಾಜ್ಯ ತುಂಬಿದಾಗ ಪುರಸಭೆಯ ಗಮನಕ್ಕೆ ತರುವ, ದಾರಿಯಲ್ಲಿ ಆಶಕ್ತರು, ಅತಂತ್ರರನ್ನು ಕಂಡಾಗಲೆಲ್ಲ ತನ್ನಿಂದಾದ ಸಹಾಯಕ್ಕೆ ಧಾವಿಸುತ್ತಾರೆ.
ಬಡತನ ಹಿನ್ನೆಲೆಯಲ್ಲಿ ಅವಿವಾಹಿತೆಯಾಗಿ ಮುಂಬೈಯಲ್ಲಿ ದಶಕ, ಬಳಿಕ ಲಂಡನ್ನಲ್ಲಿ ಮೂರೂವರೆ ದಶಕ ಹೌಸ್ ಮೇಡ್ ಆಗಿದ್ದ ಅವಿವಾಹಿತೆ ಲಿಲ್ಲಿ ಅನುಭವಗಳಿಂದಲೇ ಪಾಠ ಕಲಿತವರು. ಪರಿಸರ, ನೀರು ಹಾಳು ಮಾಡಿದ್ದಕ್ಕೆ ನಾವು ಮೇಲೆ ಹೋದಾಗ ಲೆಕ್ಕ ಕೊಡಬೇಕು. ತಪ್ಪಿಗೆ ಶಿಕ್ಷೆಯ ಹಾಗಾಗಿ ಈಗ ಜವಾಬ್ದಾರಿಯಿಂದ ವರ್ತಿಸಬೇಕು ಎನ್ನುವ ಲಿಲ್ಲಿಯವರ ನಡೆ ನುಡಿ ಅಭಿನಂದನೀಯ ಹಾಗೂ ಯುವ ಜನತೆಗೆ ಮಾದರಿ ಕೂಡಾ..
0 Comments