ಮೂಡುಬಿದಿರೆ : ಕಳೆದ ಕೆಲವು ಸಮಯಗಳಿಂದ ಖಾಯಂ ಡಾಕ್ಟರ್ ಹಾಗೂ ಸಿಬಂದಿಗಳ ಕೊರತೆಯನ್ನು ಅನುಭವಿಸುತ್ತಿದ್ದ ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಸೋಮವಾರ ಭೇಟಿ ನೀಡಿ ಪರಿಶೀಲನೆಗೈದು ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿ ನಾಳೆಯಿಂದಲೇ ವಾರಕ್ಕೆ ಮೂರು ದಿನ ಬೆಳುವಾಯಿಯ ಹಾಗೂ ಮೂರುದಿನ ವೇಣೂರಿನ ವೈದ್ಯರನ್ನು ಕಳುಹಿಸಲು ಸೂಚಿಸಿದರು.
ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ರೋಗಿಗಳು ಬರುತ್ತಿದ್ದರೂ ಖಾಯಂ ವೈದ್ಯರಿಲ್ಲದೆ ಸಮಸ್ಯೆ ಯಾಗುತ್ತಿತ್ತು. ಈ ಆಸ್ಪತ್ರೆಗೆ ಬೆಳುವಾಯಿಯ ವೈದ್ಯರಾದ ಡಾ.ಭರತ್ ಅವರು ಪ್ರಭಾರ ವೈದ್ಯಾಧಿಕಾರಿಯಾಗಿ ವಾರದಲ್ಲಿ ಒಂದು ದಿನ ಬರುತ್ತಿದ್ದರು. ಉಳಿದ ದಿನಗಳಲ್ಲಿ ವೈದ್ಯರಿಲ್ಲದಿರುವುದರಿಂದ ಈ ಭಾಗದ ಜನರು ದೂರ ಮೂಡುಬಿದಿರೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ.
ಈ ಎಲ್ಲಾ ಸಮಸ್ಯೆಯ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳು ವರದಿ ಮಾಡಿತ್ತು. ಶಿರ್ತಾಡಿಯ ರಿಕ್ಷಾ ಚಾಲಕರು ,ಸಾರ್ವಜನಿಕರು ಕಳೆದ ವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಇಲಾಖೆಯ ಅಧಿಕಾರಿಯವರಲ್ಲಿ ತಮ್ಮ ಬೇಡಿಕೆಯನ್ನಿಟ್ಟಿದ್ದರು.
ಇಂದು ( ಸೋಮವಾರ) ಆರೋಗ್ಯ ಸಚಿವರು ಕಾಶಿಪಟ್ಣಕ್ಕೆ ಭೇಟಿ ನೀಡುವುದನ್ನು ತಿಳಿದ ಶಿರ್ತಾಡಿಯ ಆಪತ್ಬಾಂಧವ ಸೂರಜ್ ಜೈನ್ ಹಾಗೂ ಜಯಶ್ರೀ ಹೋಟೆಲ್ ಮಾಲಕ ಸುರೇಶ್ ಅಂಚನ್ ಅವರು ಶಿರ್ತಾಡಿಯ ಸಾರ್ವಜನಿಕರ ಸಹಿ ಸಂಗ್ರಹಿಸಿ ಖಾದರ್ ಅವರಿಗೆ ಮನವಿ ಸಲ್ಲಿಸಿ ಆಸ್ಪತ್ರೆಗೊಮ್ಮೆ ಭೇಟಿ ನೀಡುವಂತೆ ಆಗ್ರಹಿಸಿದ್ದರು.
ಅವರ ಮನವಿಗೆ ಸ್ಪಂದಿಸಿದ ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳಲ್ಲಿ ಅಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದರು.
ಆಸ್ಪತ್ರೆಯ ಸಿಬ್ಬಂದಿಗಳ ಕಡತ,ಕೊಠಡಿಗಳು,ಔಷಧಿಗಳನ್ನು,ಯಂತ್ರಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಕೆಲ ಸಿಬ್ಬಂದಿಗಳು ತಿಂಗಳಿಗೆರಡು ದಿನ ಬಂದು ಸಹಿ ಹಾಕಿ ಹೋಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈಬಗ್ಗೆ ಟಿ.ಎಚ್.ಒ.ಅವರನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ದಿನಗಳಲ್ಲಿ ಪೂರ್ಣಕಾಲಿಕ ವೈದ್ಯರ ನೇಮಕಾತಿಯ ಬಗ್ಗೆ ಭರವಸೆ ನೀಡಿದ ಅವರು ಡಿ.ದರ್ಜೆಯ ಸಿಬ್ಬಂದಿಗಳ ವೇತನವನ್ನು ಶೀಘ್ರದಿಂದಲೇ ಹೆಚ್ಚಳಗೊಳಿಸಲಾಗುವುದೆಂದು ಹೇಳಿದರು.
ಸುರೇಶ್ ಅಂಚನ್, ಸೂರಜ್ ಜೈನ್, ಸತೀಶ್ ಕಾಶಿಪಟ್ಣ, ವಿವಿಯನ್ ಪಿಂಟೊ, ಹಸೀನಾ ಖಾನ್,ಯಶೋಧರ ಪೂಜಾರಿ, ಸತೀಶ್ ಪೂಜಾರಿ,ಶರೀಫ್ ಎಂ.ಎಂ, ಇಕ್ಬಾಲ್ ವಾಲ್ಪಾಡಿ,ಶಿರ್ತಾಡಿಯ ರಿಕ್ಷಾ ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


0 Comments