ಪುತ್ತಿಗೆ: ನೂತನ ಅನ್ನಛತ್ರ ಲೋಕಾಪ೯ಣೆ
ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿಯು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅನ್ನಛತ್ರವನ್ನು ಮಕರ ಸಂಕ್ರಮಣದಂದು ಲೋಕಾರ್ಪಣೆಗೊಳಿಸಲಾಯಿತು.
ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಅನ್ನಛತ್ರವನ್ನು ಉದ್ಘಾಟಿಸಿ ಮಾತನಾಡಿ, "ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೇವಳಗಳು ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಿವೆ. ಶಿಸ್ತಿನೊಂದಿಗೆ ಅನ್ನದಾನ ಸೇವೆಯು ದೇವಸ್ಥಾನಗಳಲ್ಲಿ ನಡೆಯುತ್ತಿರುವುದು ದೇಶದಲ್ಲೇ ಮಾದರಿಯಾಗಿದೆ. ಪ್ರಕೃತಿ ಸೌಂದರ್ಯದ ನಡುವೆ ಕಂಗೊಳಿಸುತ್ತಿರುವ ಶ್ರೀಕ್ಷೇತ್ರ ಪುತ್ತಿಗೆಯು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಶ್ಲಾಘನೀಯ" ಎಂದರು.
ಶ್ರೀಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, "ಸೋಮವಾರ, ಸಂಕ್ರಮಣ, ಜಾತ್ರೆ ಸಹಿತ ವಿಶೇಷ ಪರ್ವದಿನಗಳಲ್ಲಿ ಅನ್ನದಾನ ನಡೆಯುತ್ತಿರುವ ಪುತ್ತಿಗೆ ಕ್ಷೇತ್ರದ ಭಕ್ತಾದಿಗಳ ಅನುಕೂಲಕ್ಕಾಗಿ ಈ ಅನ್ನಛತ್ರ ನಿರ್ಮಿಸಲಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಅಡಿಗಲ್ ಅನಂತ ಕೃಷ್ಣ ಭಟ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಯಶ್ರೀ ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭಾ ನಿರ್ಗಮನ ಉಪಾಧ್ಯಕ್ಷ ನಾಗರಾಜ ಪೂಜಾರಿ, ಎಂಸಿಎಸ್ ಸೊಸೈಟಿ ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ ಎಂ., ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅನ್ನಛತ್ರದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಇಂಜಿನಿಯರ್ ರಾಧಾಕೃಷ್ಣ ಬೋರ್ಕರ್, ಮೇಸ್ತ್ರಿ ನಾರಾಯಣ, ರೋಹಿತ್ (ಸೆಂಟ್ರಿಂಗ್), ಪ್ರಶಾಂತ್ (ಫ್ಯಾಬ್ರಿಕೇಶನ್), ಸಂತೋಷ್ ಗೌಡ (ಟೈಲ್ಸ್), ವಸಂತ (ಪ್ಲಂಬಿಂಗ್ ಮತ್ತು ವೈರಿಂಗ್) ಇವರನ್ನು ಗೌರವಿಸಲಾಯಿತು.
ನವೀನ್ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



0 Comments