ಶಾಸಕ ಕೋಟ್ಯಾನ್ ಅಮಾನತು ಹಿಂಪಡೆಯುವಂತೆ ಸ್ಪೀಕರಿಗೆ ಒತ್ತಾಯಿಸಿದ ಮುಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ

ಜಾಹೀರಾತು/Advertisment
ಜಾಹೀರಾತು/Advertisment

 ಶಾಸಕ ಕೋಟ್ಯಾನ್ ಅಮಾನತು ಹಿಂಪಡೆಯುವಂತೆ   ಸ್ಪೀಕರಿಗೆ ಒತ್ತಾಯಿಸಿದ ಮುಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ

ಮೂಡುಬಿದಿರೆ : ಯಾವುದೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡದೆ ಕೇವಲ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಕೆಲಸವನ್ನು ಮಾಡುತ್ತಿರುವ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಅಮಾನತುಗೊಳಿಸಿರುವ  ಸ್ಪೀಕರ್ ಖಾದರ್ ಅವರ ನಡೆಯನ್ನು ಖಂಡಿಸಿರುವ ಮುಲ್ಕಿ ಮೂಡುಬಿದಿರೆ ಬಿಜೆಪಿ ಮಂಡಲವು ಕೂಡಲೇ ತಮ್ಮ ತಪ್ಪಿನ ಅರಿವಿನ ಮೂಲಕ ನಡೆಯನ್ನು ಸರಿಪಡಿಸಿಕೊಂಡು ಬಿಜೆಪಿ ಶಾಸಕರ ಮೇಲಿನ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದೆ. 


ರಾಜ್ಯದ ಆಡಳಿತದ ಕಾಂಗ್ರೆಸ್ ಸರಕಾರದಲ್ಲಿ ಹನಿ ಟ್ರಾಪ್  ಮತ್ತು ಸಂವಿಧಾನ ಬಾಹಿರ ಅಲ್ಪಸಂಖ್ಯಾತರ ಮೀಸಲಾತಿಯನ್ನು ಪಡೆಯುತ್ತಾರೆ ಎಂಬ ಕಾರಣಕ್ಕೆ ವಿಧಾನಸಭೆಯಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ನಡೆಯನ್ನು ವಿರೋಧಿಸಿ ಮುಲ್ಕಿ ಮೂಡುಬಿದಿರೆ ಮಂಡಲದ ವತಿಯಿಂದ ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿದರು. 


 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ಅವರು ಕೇವಲ ಸ್ಪೀಕರ್ ಆಗಿಲ್ಲದೆ ಕಾಂಗ್ರೆಸ್ ಪಕ್ಷದ ಅಡಿಯಾಳಿನಂತೆ ವರ್ತಿಸಿ ಬಿಜೆಪಿ ಶಾಸಕರ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ನುಡಿದಂತೆ ನಡೆದ ಸ್ಪೀಕರ್ ಎನಿಸಿಕೊಂಡಿದ್ದಾರೆ ಎಂದರು.


ಸ್ಪೀಕರ್  ಅವರು ನಮ್ಮದೇ ಜಿಲ್ಲೆಯವರು ಆಗಿದ್ದರಿಂದ ಅವರ ಮೇಲೆ ಪಕ್ಷಾತೀತವಾದ ಗೌರವ ಇತ್ತು ಹಾಗೂ ಜಿಲ್ಲೆಯ ಬಗೆಗಿನ ಕಾಳಜಿ ಇರಬಹುದು ಎಂಬ ನಂಬಿಕೆ ಇತ್ತು. ಆದರೆ ಈ ನಂಬಿಕೆಯನ್ನು ಅವರು ಹುಸಿಗೊಳಿಸಿದ್ದಾರೆಂದು ಹೇಳಿದರು.


ಶಾಸಕ ಉಮಾನಾಥ ಕೋಟ್ಯಾನ್ ಅವರು ಮುಲ್ಕಿ ಮೂಡುಬಿದಿರೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಮುಂದಿನ ಇನ್ನಷ್ಟು ಕಾಲ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಮೂಡುಬಿದಿರೆಯಲ್ಲಿ ಸಾಧ್ಯವಿಲ್ಲ ಎಂಬುದನ್ನು ಅರಿತ ಕಾಂಗ್ರೆಸ್ಸಿಗರು ಶಾಸಕರ ಮೇಲೆ ತೇಜೋವಧೆ ಮಾಡುವ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬರುತ್ತಿದ್ದಾರೆಂದು ಆರೋಪಿಸಿದರು.


ಸ್ಪೀಕರ್ ಖಾದರ್ ಅವರಿಗೆ ತಮ್ಮ ಮಂಗಳೂರು ಕ್ಷೇತ್ರವನ್ನು ಆರು ಅವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿಲ್ಲ ಎಂಬುದು ಜನರಿಗೆ ಗೊತ್ತಿರುವ ವಿಷಯ. ಆದರೆ ಶಾಸಕ ಕೋಟ್ಯಾನ್ ರವರು ಮೊದಲ ಪ್ರಯತ್ನದಲ್ಲೇ ಮೂಲ್ಕಿ ಮೂಡುಬಿದಿರೆಯಲ್ಲಿ ಭಗೀರಥ ಪ್ರಯತ್ನದಿಂದ ಮೂಲಭೂತ ಸೌಕರ್ಯಗಳು ಶಿಕ್ಷಣ ವ್ಯವಸ್ಥೆ ಸಹಿತ ಅನೇಕ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಣಿಕೆಯನ್ನು ನೀಡಿದ್ದಾರೆ. 


ಕೋಟ್ಯಾನ್ ಅವರು ಮತ್ತೊಮ್ಮೆ ಜಯಭೇರಿ ಬಾರಿಸುವ ಮೂಲಕ ಜನತೆಯ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳದಿದ್ದರೆ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಸರ್ಕಾರದ ವಿರುದ್ಧ ಅಭಿಯಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ಕಾಂಗ್ರೆಸ್ ಪಕ್ಷವು ತನ್ನ ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಒಲೈಸಿಕೊಂಡು ತುಷ್ಟೀಕರಣ ರಾಜಕೀಯ ಮಾಡುತ್ತಿರುವುದು ಈ ನಾಡಿಗೆ ಅಪ್ಪಳಿಸಿರುವ ಕೇಡುಗಾಲವಾಗಿದೆ. ಮುಸ್ಲಿಂ ಗುತ್ತಿಗೆದಾರರಿಗೆ 4% ಮೀಸಲಾತಿ ನೀಡಿರುವುದು ಅಸಂವಿಧಾನಿಕ ನಡೆಯಾಗಿದೆ. ಇದನ್ನು ಪ್ರಶ್ನಿಸುತ್ತೇವೆ ಮತ್ತು ಬಿಲ್ ಪಾಸ್ ಮಾಡಲು ಅವಕಾಶ ನೀಡಲ್ಲ ಎಂಬ ಕಾರಣಕ್ಕೆ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ ಎಂದ ಅವರು ಅಮಾನತು ಕ್ರಮವನ್ನು ಹಿಂಪಡೆಯದಿದ್ದರೆ ಕ್ಷೇತ್ರದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.


ಒಂದು ವೇಳೆ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲದಿದ್ದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಬಣ್ಣಿಸುತ್ತದೆ. ಬಿಜೆಪಿ ಪಕ್ಷವು ಸಂವಿಧಾನ ಹಾಗೂ ಅದರ ಸೃಷ್ಟಿಕರ್ತ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಪ್ರತಃಸ್ಮರಣೀಯವಾಗಿ ಪೂಜಿಸುವ ಪಕ್ಷವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಅಂಬೇಡ್ಕರ್ ರವರನ್ನು ಪ್ರತಃಸ್ಮರಣೀಯವಾಗಿ ಪೂಜಿಸಲ್ಪಡುತ್ತೇವೆ. ಇಂತಹ ಮಹಾನೀಯ ಬರೆದಿರುವ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿರುವ ಡಿಕೆ ಶಿವಕುಮಾರ್ ದುರ್ವರ್ತನೆಯು ಅಹಂಕಾರದಿಂದ ಕೂಡಿದೆ. 

ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಅವರ ಓಲೈಕೆಗಾಗಿ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬ ದರ್ಪದ ಮಾತು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ .ಆದರೆ ಬಿಜೆಪಿ ಪಕ್ಷವು ಇದನ್ನು ಸವಾಲಾಗಿ 

ಸ್ವೀಕರಿಸಲಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈಶ್ವರ ಕಟೀಲ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ, ಮಂಡಲದ ಪ್ರ. ಕಾಯ೯ದಶಿ೯ಗಳಾದ ರಂಜಿತ್ ಪೂಜಾರಿ ತೋಡಾರ್  ಮತ್ತು ಹರಿಪ್ರಸಾದ್ ಶೆಟ್ಟಿ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮುಲ್ಕಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೈಲೇಶ್ ಕುಮಾರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Post a Comment

0 Comments