ವಿಹಿಂಪ ಷಷ್ಠಿಪೂರ್ತಿ ಸಮಾರೋಪ : ಕರಸೇವಕರು , ಭಜನಾ ತಂಡಗಳಿಗೆ ಗೌರವ

ಜಾಹೀರಾತು/Advertisment
ಜಾಹೀರಾತು/Advertisment

 ವಿಹಿಂಪ ಷಷ್ಠಿಪೂರ್ತಿ ಸಮಾರೋಪ : ಕರಸೇವಕರು , ಭಜನಾ ತಂಡಗಳಿಗೆ ಗೌರವ

ಮೂಡುಬಿದಿರೆ :  ವಿಹಿಂಪ ಮೂಡುಬಿದಿರೆ ಪ್ರಖಂಡದ ವತಿಯಿಂದ ಇಲ್ಲಿನ ಕನ್ನಡ ಭವನದಲ್ಲಿ ಶನಿವಾರ ರಾತ್ರಿ ನಡೆದ ವಿಹಿಂಪ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಕಾರ್ಯಕ್ರಮದಲ್ಲಿ ಅಯೋಧ್ಯಾ ಕರಸೇವಕರನ್ನು ಗೌರವಿಸಲಾಯಿತು ಹಾಗೂ ಮೂಡುಬಿದಿರೆ ಪರಿಸರದಲ್ಲಿರುವ ೬೦ಕ್ಕೂ ಅಧಿಕ ಭಜನಾ ತಂಡಗಳನ್ನು, ವಿಹಿಂಪ ಪ್ರಖಂಡದಲ್ಲಿ ವಿವಿಧ ಹೊಣೆಗಾರಿಕೆ ನಿರ್ವಹಿಸಿದವರನ್ನು ಗುರುತಿಸಿ ಗೌರವಿಸಲಾಯಿತು. 

ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ  ಸಮಾರಂಭದಲ್ಲಿ ಆಶೀರ್ವಚನ ನೀಡಿ ನಮ್ಮ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠವಾದ ಸಂಸ್ಕೃತಿಯಾಗಿದೆ. ಶರೀರದ ಚಿಕಿತ್ಸೆ, ಖಗೋಳದ ವಿಜ್ಞಾನ, ಆಯುರ್ವೇದದ ಶಾಸ್ತ್ರ, ಅಥವಾ ಬಂಧುತ್ವವಿರಬಹುದು ತಮ್ಮ ಪರಿವಾರವನ್ನು, ಸಮಾಜವನ್ನು, ದೇಶವನ್ನು ಹಾಗೂ ತನ್ನ ಬಂಧುವನ್ನು ನೋಡಿಕೊಳ್ಳುವ ರೀತಿಯಿಂದ ಇದು ಜಗತ್ತಿಗೆ ಆದರ್ಶವಾದ ಸಂಸ್ಕೃತಿಯನ್ನು ನೀಡಿದೆ.    

ವಿಶ್ವಹಿಂದು ಪರಿಷತ್ ಭಾರತೀಯ ಸಂಸ್ಕೃತಿಯ ಉಳಿವು, ಗೋವುಗಳ ರಕ್ಷಣೆ, ಧರ್ಮದ ರಕ್ಷಣೆಯಲ್ಲಿರುವ ಮುಂಚೂಣಿ ಸಂಘಟನೆಯಾಗಿದೆ. ಧರ್ಮರಕ್ಷಣೆಯ ಕಾರ್ಯದೊಂದಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸ್ಪಂದನೆ, ಸಂಕಷ್ಟದಲ್ಲಿರುವವರಿಗೆ ಮಿಡಿಯುವ ಮಹತ್ವದ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದೆ. ನಮ್ಮ ಪ್ರತಿಯೊಬ್ಬ ಹಿಂದು ಕೂಡಾ ಇದರ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು. 

ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಅರ್ಚಕ ಅನಂತ ಕೃಷ್ಣ ಅಡಿಗಳ್ ಅಧ್ಯಕ್ಷತೆ ವಹಿಸಿದ್ದರು. 



ವಿಹಿಂಪ ದಕ್ಷಿಣ ಪ್ರಾಂತದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ಜಗತ್ತಿನ ಅತೀ ದೊಡ್ಡ ಹಿಂದೂ ಸಂಘಟನೆ ಅದು ವಿಹಿಂಪ. ಇದರಿಂದಾಗಿ ಇಂದು  ಸಮಾಜದಲ್ಲಿ  ಹೆಚ್ಚು ಹೆಚ್ಚು ಬದಲಾವಣೆಗಳಾಗಿವೆ. ವಿಹಿಂಪವು  ದೇಶ ವಿದೇಶಗಳಲ್ಲಿ ೯೦ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ವರ್ಷಕ್ಕೆ ೨ಲಕ್ಷ ಗೋವುಗಳ ರಕ್ಷಣೆ ಮಾಡುತ್ತಿದ್ದು ೬ಸಾವಿರ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಜಾಲದಿಂದ ರಕ್ಷಿಸಲಾಗಿದೆ. ಮತಾಂತರದ ವಿರುದ್ಧ ಹೋರಾಟ ಮಾಡುತ್ತಿದ್ದು ಕಳೆದ ೫೦ ವರ್ಷಗಳಲ್ಲಿ ಮತಾಂತರಗೊಂಡ ೬೦ಲಕ್ಷಕ್ಕೂ ಅಧಿಕ ಮಂದಿಯನ್ನು ಮಾತೃಧರ್ಮಕ್ಕೆ ಕರೆತರಲಾಗಿದೆ. ೭೦೦ ಶಾಲೆಗಳಲ್ಲಿ ರಾಮಾಯಣ ಮಹಾಭಾರತ ತರಗತಿಗಳನ್ನು ನಡೆಸಲಾಗುತ್ತಿದೆ. ಸತ್ಸಂಗದ ಮೂಲಕ ಧರ್ಮಜಾಗೃತಿಯೊಂದಿಗೆ ನೂರಾರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ  ಎಂದರು. 


 ವಿಹಿಂಪ ಪ್ರಾಂತ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. 


ವಿಹಿಂಪ ಪ್ರಖಂಡ ಅಧ್ಯಕ್ಷ ಶ್ಯಾಮ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದುಚೇತನ್ ಬೋರುಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಸುಚೇತನ್ ಜೈನ್ ಸ್ವಾಗತಿಸಿದರು. ಶಾಂತರಾಮ ಕುಡ್ವ ವಂದಿಸಿದರು.

Post a Comment

0 Comments