ಅನಧಿಕೃತ ಕೈಗಾರಿಕೆ ಕಟ್ಟಡ ಕಾಮಗಾರಿ: ಗ್ರಾಮಸ್ಥರಿಂದ ವಿರೋಧ
*ಪಡುಮಾರ್ನಾಡು ಪಂಚಾಯತ್ ಮಾಸಿಕ ಸಭೆ ಅರ್ಧದಲ್ಲಿ ಮುಂದೂಡಿಕೆ.*
ಮೂಡುಬಿದಿರೆ: ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಸಮೀಪ ನಿರ್ಮಾಣಗೊಳ್ಳುತ್ತಿರುವ ಅನಧಿಕೃತ ಕೈಗಾರಿಕೆ ಕಟ್ಟಡ ಕಾಮಗಾರಿ ಹಾಗೂ ಬೃಹತ್ ಆಕಾರದ ಬಾಯ್ಲರ್ ತಯಾರಿಕ ಘಟಕ ಪ್ರಾರಂಭಗೊಂಡಿದ್ದು ಇದರಿಂದ ಸ್ಥಳೀಯ ಎಲ್ಲಾ ನಿವಾಸಿಗಳಿಗೆ ಶಬ್ದ ಮಾಲಿನ್ಯ ಹಾಗೂ ಕೃಷಿ ಆಸ್ತಿಗಳಿಗೆ ಪರಿಸರ ಮಾಲಿನ್ಯ ಆಗುತ್ತಿರುವುದರ ಬಗ್ಗೆ ಗ್ರಾಮಸ್ಥರು ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಮಾಸಿಕ ಸಭೆಯಲ್ಲಿ ದೂರನ್ನು ಸಲ್ಲಿಸಲು ಬಂದಿದ್ದರು.
ಈ ಕೈಗಾರಿಕೆಗೆ ಗ್ರಾಮ ಪಂಚಾಯತ್ ನಿಂದ ಇದುವರೆಗೆ ಯಾವುದೇ ಪರವಾನಿಗೆ ನೀಡಿರುವುದಿಲ್ಲ ಆದರೂ ಅಧ್ಯಕ್ಷರ ಕುಮ್ಮಕ್ಕಿನ ಮೇರೆಗೆ ಈ ಕೈಗಾರಿಕೆ ರಾಜಾರೋಷವಾಗಿ ಉತ್ಪಾದನೆ ಹಾಗೂ ಬೃಹತ್ ಕಟ್ಟಡಗಳನ್ನು ಕಟ್ಟಿರುತ್ತಾರೆ ಎಂದು ಆರೋಪಿಸಿದರು.
ಕಟ್ಟಡ ಕಟ್ಟಲು ಕೂಡ ಯಾವುದೇ ಪರವಾನಿಗೆಯನ್ನು ಗ್ರಾಮ ಪಂಚಾಯತ್ ನಿಂದ ಪಡೆದಿರುವುದಿಲ್ಲ ಈಗಾಗಲೇ ಈ ಜಾಗದ ಇಂಡಸ್ಟ್ರಿಯಲ್ ಕನ್ವೆರ್ಷನ್ ಮಾಡಿದನ್ನು ಮಾನ್ಯ ಸಹಾಯಕ ಆಯುಕ್ತರು ಮಂಗಳೂರು ಇವರು ತಡೆಯಾಜ್ಞ ನೀಡುತ್ತಾರೆ ಆದರೂ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಅವರು ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುತ್ತಿದ್ದಾರೆಂದು ಆರೋಪಿಸಿ ತರಾಟೆಗೆ ತೆಗೆದುಕೊಂಡರು.
ಯಾವುದೇ ಕಾರಣಕ್ಕೂ ಈ ಕಟ್ಟಡವನ್ನು ಅಥವಾ ತಯಾರಿಕ ಘಟಕವನ್ನು ಬಂದ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷರು ದೂರುದಾರರಿಗೆ ತಿಳಿಸಿದರು.
ಆದರೆ ಹಲವಾರು ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಘಟಕವು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಪರವಾನಿಗೆ ಪಡೆಯದೆ ಇಷ್ಟು ದೊಡ್ಡ ಉದ್ದಿಮೆಯನ್ನು ಸ್ಥಾಪಿಸುವುದು ಕಾನೂನುಬಾಹಿರವಾಗುತ್ತದೆ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ನಿರ್ಣಯ ಕೈಗೊಂಡರೆ ಆ ಉದ್ದಿಮೆಯನ್ನು ನಾವು ಬಂದ್ ಮಾಡಬಹುದು ಎಂದು ಹೇಳಿದರು.
ಆದರೆ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಯಾವುದೇ ಕಾರಣಕ್ಕೂ ಬಂದ್ ಮಾಡಲು ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಹೇಳಿದಾಗ ಗ್ರಾಮಸ್ಥರು ರೊಚ್ಚಿಗೆದ್ದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಹಾಗೂ ಇದರ ಬಗ್ಗೆ ವ್ಯವಸ್ಥಿತ ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಸದಸ್ಯರಾದ ಮೊಹಮದ್ ಅಸ್ಲಾಂ ಸತೀಶ್ ಕರ್ಕೇರ, ಅಭಿನಂದನ್ ಬಲ್ಲಾಳ್ ಹಾಗೂ ರಮೇಶ್ ಯಸ್ ಶೆಟ್ಟಿ ಈ ಉದ್ದಿಮೆಯನ್ನು ಕೂಡಲೇ ಬಂದ್ ಮಾಡಲು ನಿರ್ಣಯ ಕೈಗೊಳ್ಳಬೇಕು ಎಂದರು
ಇದಕ್ಕೆ ಒಪ್ಪದ ಅಧ್ಯಕ್ಷ ವಾಸುದೇವ ಭಟ್ ಯಾವುದೇ ಕಾರಣಕ್ಕೂ ಉದ್ದಿಮೆಯನ್ನು ನಿಲ್ಲಿಸಲಾಗುವುದಿಲ ತೊಂದರೆ ಇದ್ದರೆ ಅದನ್ನು ಪರಿಹರಿಸೋಣ ಎಂದರು.
0 Comments