ಮೂಡುಬಿದಿರೆ ಸಹಕಾರಿ ಸೊಸೈಟಿ 108 ನೇ ಮಹಾಸಭೆ
ಸಕಾಲದಲ್ಲಿ ಸಾಲ ಮರುಪಾವತಿಯಿಂದ ಅಭಿವೃದ್ಧಿ : ಎಂ. ಬಾಹುಬಲಿ ಪ್ರಸಾದ್
ಮೂಡುಬಿದಿರೆ: ಸೊಸೈಟಿಯ ಸದಸ್ಯರೆಲ್ಲರ ಕಾಳಜಿ ಮತ್ತು ಸಹಕಾರದಿಂದ
ಕಳೆದ ಆರ್ಥಿಕ ವರ್ಷದಲ್ಲಿ 1736 ಕೋಟಿ ರೂ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಸದಸ್ಯರ ವಿಶ್ವಾಸ ಮತ್ತು ವ್ಯವಹಾರದ ಜತೆಗೆ ಸಾಲಗಾರರ ಕ್ಲಪ್ತ ಸಮಯದ ಮರುಪಾವತಿಯಿಂದ ಈ ಅಭಿವೃದ್ಧಿ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೊಸೈಟಿ ಅಧ್ಯಕ್ಷ ಸಹಕಾರಿ ರತ್ನ ಎಂ. ಬಾಹುಬಲಿ ಪ್ರಸಾದ್ ಹೇಳಿದರು. ಅವರು ಕನ್ನಡ ಭವನದಲ್ಲಿ ರವಿವಾರ ಜರಗಿದ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 108ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದಸ್ಯರ ಆರೋಗ್ಯ ವಿಮೆಯನ್ನು ಬಲಪಡಿಸುವ ಚಿಂತನೆಯಿದೆ. ಡಿವಿಡೆಂಡ್ ಪಡೆಯಲಾಗದವೂ ಅಗತ್ಯ ದಾಖಲೆಗಳನ್ನು ಒದಗಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸಾಲ ವಸೂಲಾತಿಗೆ ಆದ್ಯತೆ ನೀಡಿ ವಿಶೇಷ ಗಮನ ಹರಿಸಿ ವ್ಯವಹರಿಸಲಾಗುತ್ತಿದ್ದು ಅಗತ್ಯ ಬಿದ್ದರೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಎಂದವರು ಹೇಳಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ ಕಾಮತ್ ಸೊಸೈಟಿಯ ವಾರ್ಷಿಕ ವರದಿ ಮಂಡಿಸಿ ಸೊಸೈಟಿಯು 11 . 16 ಕೋಟಿ ರೂ ನಿವ್ವಳ ಲಾಭಗಳಿಸಿದೆ. ಕಳೆದ 24 ವರ್ಷಗಳಂತೆ ಈ ಬಾರಿಯೂ ಸೊಸೈಟಿ ಎ ದರ್ಜೆಯಲ್ಲಿ ಕೆಲಸ ಮಾಡುತ್ತಿದ್ದು ಸದಸ್ಯರಿಗೆ ಶೇ 25 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ ಎಂದರು. ಕಲ್ಪ ವೃಕ್ಷ ಆರೋಗ್ಯ ಕಾರ್ಡ್ , ಡಯಾಲಿಸಿಸ್ ಸೌಲಭ್ಯ, ಮಳೆ ಕೊಯ್ಲು, ರೈತ ಪಿಂಚಣಿ, ನೌಕರರಿಗೆ ಪಿಂಚಣಿ, ಪವರ್ ಟಿಲ್ಲರ್ ಟ್ರಾಕ್ಟರ್ ಖರೀದಿಗೆ ನಿಬಡ್ಡಿಯಲ್ಲಿ ಸಾಲ, ಸೋಲಾರ್ ಲೈಟ್, ವಾಟರ್ ಹೀಟರ್ ಖರೀದಿಗೆ ರಿಯಾಯಿತಿ ದರದ ಸಾಲ ಸಹಿತ ಹಲವು ಗ್ರಾಹಕ ಸ್ನೇಹಿ ಯೋಜನೆಗಳ ಕುರಿತು ಅವರು ವಿವರಿಸಿದರು.
ಅಂದಾಜು 15.60 ಕೋಟಿ ಮಿಗತೆಯ 60.10 ಕೋಟಿ ರೂ. ಬಜೆಜ್ ಮಂಡಿಸಲಾಯಿತು.
ಲೆಕ್ಕ ಪರಿಶೋಧನಾ ವರದಿ, ನಿವ್ವಳ ಲಾಭ ವಿಂಗಡಣೆ, ಹೆಚ್ಚುವರಿ ಖರ್ಚಿನ ಐವೇಜಿಗೆ ಮಂಜೂರಾತಿ ಪಡೆಯಲಾಯಿತು. ಸುದರ್ಶನ್ ಭಟ್, ಸಂತೋಷ್ ನಾಯ್ಕ್ ವಿವರ ನೀಡಿದರು.
ಆಡಳಿತ ಮಂಡಳಿಯ ನಿರ್ದೇಶಕ ಮಾಜಿ ಸಚಿವ ಕೆ. ಅಭಯಂಚಂದ್ರ ಜೈನ್ ಮಾತನಾಡಿ ಆರೋಗ್ಯ ಕಾರ್ಡ್, ನೌಕರರಿಗೆ ಪಿಂಚಣಿಯಂತಹ ಮಾದರಿ ಕಾರ್ಯಕ್ರಮಗಳ ಮೂಲಕ ಸೊಸೈಟಿ ಬೆಳೆಯುವಲ್ಲಿ ಎಲ್ಲರ ಪರಿಶ್ರಮವಿದೆ. ಮಾಜಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿಯವರ ಅವಧಿಯಲ್ಲಿ ಸೊಸೈಟಿ ಇನ್ನಷ್ಟು ಗಟ್ಟಿಯಾಗಿದೆ. ಸೊಸೈಟಿಯ ಹಿತರಕ್ಷಣೆ ನಮ್ಮೆಲ್ಲರ ಧ್ಯೇಯವಾಗಲಿ ಎಂದರು.
ನಿರ್ದೇಶಕರಾದ ಮನೋಜ್ ಶೆಟ್ಟಿ, ಅಬ್ದುಲ್ ಗಫೂರ್, ಎಂ.ಪಿ ಅಶೋಕ್ ಕಾಮತ್, ಜ್ಞಾನೇಶ್ವರ ಕಾಳಿಂಗ ಪೈ, ಎಂ. ಪದ್ಮನಾಭ, ಪ್ರೇಮಾ ಎಸ್.ಸಾಲ್ಯಾನ್, ಅನಿತಾ ಪಿ. ಶೆಟ್ಟಿ, ದಯಾನಂದ ನಾಯ್ಕ, ಉಪಸ್ಥಿತರಿದ್ದರು.
ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರ ಶೇಖರ್ ಎಂ. ಕಾರ್ಯಕ್ರಮ ನಿರೂಪಿಸಿ ಸದಸ್ಯರ ಲಿಖಿತ, ಮೌಖಿಕ ಪ್ರಶ್ನೆಗಳಿಗೆ ವಿವರ ನೀಡಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾದರಿ ಉಪನಿಬಂಧನೆ ರಾಜ್ಯ ಸಹಕಾರ ಇಲಾಖೆಯ ಸೂಚನೆಯಂತೆ ಅಳವಡಿಸಿಕೊಳ್ಳುವ ಬಗ್ಗೆ ಹಾಗೂ ಕೇಂದ್ರ ಸರಕಾರದ ಸೂಚನೆಯಂತೆ ಕಾಮನ್ ಸಾಫ್ಟ್ ವೇರ್ ಅಳವಡಿಕೆಯ ಬಗ್ಗೆ
ಸಾಧಕ ಬಾಧಕಗಳನ್ನು ಚರ್ಚಿಸಿ ಸದಸ್ಯರ, ಸಂಘದ ಹಿತರಕ್ಷಣೆಗೆ ಅಗತ್ಯವಿರುವ ಕ್ರಮಕ್ಕೆ ಆಡಳಿತ ಮಂಡಳಿ ಮುಂದಾಗಲಿದೆ ಎಂದರು. ಉಪಾಧ್ಯಕ್ಷ ಕೆ. ಗಣೇಶ್ ನಾಯಕ್ ವಂದಿಸಿದರು.
0 Comments