ಗಾಣಿಗರ ಸಂಘದಿಂದ ಜಿಲ್ಲಾ ಮಟ್ಟದ ವಾಲಿಬಾಲ್, ಶಟ್ಲ್, ತ್ರೋಬಾಲ್ ಪಂದ್ಯಾಟ
ಮೂಡುಬಿದಿರೆ: ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ ಮೂಡುಬಿದಿರೆ ಆಶ್ರಯದಲ್ಲಿ ಧವಲಾ ಕಾಲೇಜಿನಲ್ಲಿ ಭಾನುವಾರ ಅವಿಭಜಿತ ದ.ಕ ಜಿಲ್ಲಾ ಮಟ್ಟದ ವಾಲಿಬಾಲ್ ಶಟ್ಲ್ ಪಂದ್ಯಾಟ ಹಾಗು ದಿವಂಗತ ವಿಲಾಸಿನಿ ಮುರಳೀದಾಸ್ ಕಾವೂರು ಸ್ಮರಣಾರ್ಥ ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾಟ ನಡೆಯಿತು.
ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಿರಂತರ ಪರಿಶ್ರಮ ಯಶಸ್ಸನ್ನು ತಂದುಕೊಡುತ್ತದೆ. ಸೋಲು ಗೆಲುವನ್ನು ಯೋಚಿಸದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಶಿಕ್ಷಣದ ಜತೆಗೆ ಕ್ರೀಡೆಯು ಅಗತ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮುದಾಯದ ಐಖ್ಯತೆ ಮತ್ತು ಒಗ್ಗೂಡುವಿಕೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಆದರೆ ಮೊಬೈಲ್ ಗೀಳಿನಿಂದಾಗಿ ಯುವ ಸಮುದಾಯ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸನ್ಮಾನ : ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕವಿತ ಎಂ. ಹಾಗೂ ಇನ್ನೋರ್ವ ಸಾಧಕ ವಿದ್ಯಾರ್ಥಿನಿ ಅನ್ವಿತಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಗೌರವ ಅಧ್ಯಕ್ಷ ಡಾ.ಸತ್ಯಶಂಕರ್ ಪುತ್ರನ್, ಉದ್ಯಮಿ ಧೀರಜ್ ಕುಮಾರ್ ಕೊಳಕೆ, ಮುರಳೀದಾಸ್ ಕಾವೂರು, ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ ಎಡಪದವು ಇದರ ಅಧ್ಯಕ್ಷ ಭಾಸ್ಕರ್ ಎಸ್.ಎಡಪದವು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಅಶ್ವಿನಿ ಪ್ರತಾಪ್, ಯುವ ವೇದಿಕೆಯ ಅಧ್ಯಕ್ಷ ನವೀನ್ ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಜಗನ್ನಾಥ ವಂದಿಸಿದರು.
0 Comments