ರಸ್ತೆ ಬದಿಗಳಲ್ಲಿ ಸ್ವಚ್ಛತಾ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ರಸ್ತೆ ಬದಿಗಳಲ್ಲಿ ಸ್ವಚ್ಛತಾ ಅಭಿಯಾನ

ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ವಿಪತ್ತು ನಿರ್ವಹಣಾ ಘಟಕ ಹೊಸಂಗಡಿ ಹಾಗೂ ವೇಣೂರು ವಲಯ ಮತ್ತು ತಾಕೋಡೆ-ಪುಚ್ಚಮೊಗರು ಗ್ರಾಮಸ್ಥರ ಸಹಯೋಗದಲ್ಲಿ   ಪುಚ್ಚಮೊಗರು-ಬಿರಾವು-ಕರಿಂಜೆ ರಸ್ತೆ ಬದಿಯಲ್ಲಿನ ಕಸ, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸ್ವಚ್ಛತಾ ಅಭಿಯಾನದ ಮೂಲಕ ಬುಧವಾರ  ತೆರವುಗೊಳಿಸಲಾಯಿತು.

ಉಪ ವಲಯ ಅರಣ್ಯಾಧಿಕಾರಿ  ಮಂಜುನಾಥ್ ಗಾಣಿಗ  ಸ್ವಚ್ಛತಾ ಅಭಿಯಾನವನ್ನು  ಉದ್ಘಾಟಿಸಿ ಮಾತನಾಡಿ  ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದು  ಇತ್ತೀಚಿನ ಬಹಳ ದೊಡ್ಡ ಸಮಸ್ಯೆ. ಕಾಡಿನ ರಸ್ತೆಯಲ್ಲಿ ಕಸವನ್ನು  ಅವಿದ್ಯಾವಂತರು ಎಸೆಯಲು ಬರುವುದಿಲ್ಲ.  ವಿದ್ಯಾವಂತರು ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಅಪರಾಧ. ಕಾನೂನಿನ ಮೂಲಕ ಶಿಕ್ಷೆ ವಿಧಿಸಬಹುದು. ದಂಡ ವಿಧಿಸಬಹುದು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೇ ಕಸ ಬಿಸಾಡುವ ಕೃತ್ಯ ನಾಚಿಕೆಗೇಡಿನ ಸಂಗತಿ. ಒಮ್ಮೆ ಸ್ವಚ್ಛಗೊಳಿಸಿದ ನಂತರ ಪುನಃ ಕಸ ಎಸೆಯುವುದನ್ನು ತಪ್ಪಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವ ಕೆಲಸ ಆಗಬೇಕು. ಅರಣ್ಯ ಇಲಾಖೆಯ ವತಿಯಿಂದ ಈ ಬಗ್ಗೆ ಪ್ರಯತ್ನಿಸಲಾಗುವುದು. ಮೂಡುಬಿದಿರೆ ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ತಡೆಯಲು ಕಸ ಎಸೆದವರ ಭಾವಚಿತ್ರವನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ ಕಸ ಎಸೆಯುವವರ ಸಂಖ್ಯೆ ಒಂದಿಷ್ಟು ಕಡಿಮೆ ಆಗಿದೆ ಇಂತಹ ಪ್ರಯತ್ನ ಎಲ್ಲೆಡೆ ಆಗಬೇಕಾಗಿದೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡ, ಸ್ವಸಹಾಯ ಸಂಘಗಳ ಒಕ್ಕೂಟ, ಸ್ಥಳೀಯರೆಲ್ಲರೂ ಸೇರಿಕೊಂಡು ಸ್ವಚ್ಛ ಮಾಡಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ ಎಂದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್  ರವರು ಮಾತನಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮೂಲಕ ಇಂತಹ ಕಾರ್ಯಕ್ರಮ ಗಳನ್ನು ರಾಜ್ಯದ 90 ತಾಲ್ಲೂಕು ಗಳಲ್ಲಿ ಮಾಡಿಕೊಂಡು ಬರಲಾಗುತ್ತಿದೆ. 10,300 ಸ್ವಯಂಸೇವಕರು ಶೌರ್ಯ ಘಟಕಕ್ಕೆ ಸೇರ್ಪಡೆ ಗೊಂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ, ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ, ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನವನ್ನು ಕಳೆದ ಮೂರು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ವೇಣೂರು ಬಾಹುಬಲಿ ಮಹಾ ಮಸ್ತಕಾಭಿಷೇಕ ಇರುವ ಹಿನ್ನಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ಕಸದ ರಾಶಿ ಸ್ವಚ್ಛಗೊಳಿಸಲು ಇಂದು ಸೇರಿದ್ದು 65 ಸ್ವಯಂಸೇವಕರು ಶ್ರಮದಾನ ಮಾಡುತ್ತಿದ್ದಾರೆ ಎಂದರು.


ಹೊಸಬೆಟ್ಟು ಗ್ರಾಮ ಪಂಚಾಯತ್  ಅಧ್ಯಕ್ಷೆ  ಸೌಮ್ಯ , ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಸುನೀತಾ, ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಮೇಲ್ವಿಚಾರಕರು, ಸ್ಥಳಿಯರಾದ ರಿಕ್ಕಿ, ಮೂಡುಬಿದಿರೆ ವಲಯದ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಮೇಲ್ವಿಚಾರಕರು ಈ ಸಂದರ್ಭದಲ್ಲಿ ಹಾಜರಿದ್ದರು.

Post a Comment

0 Comments