ಗಾಣಿಗರ ಸಂಘದಿಂದ 12 ನೇ ವರ್ಷದ ಆಟಿದ ಕೆಸರ್ಡೊಂಜಿ ದಿನ
ಮೂಡುಬಿದಿರೆ: ಗಾಣದ ಕೊಟ್ಟಿಗೆ ಧಾರ್ಮಿಕವಾಗಿ ಮಹತ್ವವುಳ್ಳ ಸ್ಥಳ. ದೇವಸ್ಥಾನ, ದೈವಸ್ಥಾನದಂತೆ ಮಹತ್ವ ಹೊಂದಿರುವ ಪಾರಂಪರಿಕ ಗಾಣದ ಕೊಟ್ಟಿಗೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸ ಗಾಣಿಗ ಸಮಾಜದವರಿಂದಾಗಬೇಕಾಗಿದೆ
ಎಂದು ತುಳುನಾಡ ಸಾಂಸ್ಕೃತಿಕ ವಿಮರ್ಶಕ, ನಿರ್ಮಾಪಕ ತಮ್ಮಣ್ಣ ಶೆಟ್ಟಿ ಹೇಳಿದರು.
ಅವರು ಸಫಲಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವವೇದಿಕೆ ಹಾಗೂ ಮಹಿಳೆಯರ ವೇದಿಕೆ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಕರಿಂಜೆಯ ಗುರುಬೆಟ್ಟು ಗದ್ದೆಯಲ್ಲಿ ಭಾನುವಾರ ನಡೆದ 12 ನೇ ವರ್ಷದ ಆಟಿದ ಕೆಸರ್ಡೊಂಜಿ ದಿನ ಕಾರ್ಯಕ್ರಮಮದಲ್ಲಿ ದೈನಂದಿನ ಜೀವನದಲ್ಲಿ ದೈವಾರಾಧನೆಯ ಮಹತ್ವ ಕುರಿತು ಮಾತನಾಡಿದರು.
ಜಾತಿಬೇಧವಿಲ್ಲದ ಮುಗ್ದ ಆರಾಧನೆಯಾದ ದೈವಾರಾಧನೆಯಲ್ಲಿ ಗಾಣಿಗ ಸಮಾಜ ಪಾತ್ರ ಮಹತ್ವದ್ದು. ಆಟಿ ತಿಂಗಳು ಅಪಶಕುನದ, ದರಿದ್ರದ ತಿಂಗಳಲ್ಲ. ಹಿಂದಿನ ಆಟಿ ಆಚರಣೆಯ ಹಿಂದೆ ವೈಜ್ಞಾನಿಕ ಜ್ಞಾನವೂ ಅಡಗಿದೆ. ವೈಜ್ಞಾನಿಕವಾಗಿರುವ ತುಳುನಾಡಿನ ಆಚರಣೆಗಳನ್ನು, ಅದರ ಮೂಲ ನಂಬಿಕೆಗಳನ್ನು ಯುವಪೀಳಿಗೆಗೆ ತಿಳಿಸುವಂತಹ ಕೆಲಸ ಹಿರಿಯರಿಂದ, ಜಾತಿ ಸಂಘಟನೆಗಳಿಂದಾಗಬೇಕಾಗಿದೆ ಎಂದರು.
ಪುತ್ತೂರು ತಾಲೂಕು ಸಫಲಿಗರ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಹರಿರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು.
ಮೂಡುಬಿದಿರೆ ಕ್ರಿಯೇಟಿವ್ ಎಜ್ಯುಕೇಶನ್ ಫೌಂಡೇಶನ್ನ ಸಹಸಂಸ್ಥಾಪಕ ಅಮೃತ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುಳುನಾಡು ಪ್ರಕೃತಿಯ ಆರಾಧನೆಯ ನಾಡು. ನಮ್ಮ ಕೃಷಿಭೂಮಿಯಲ್ಲಿರುವ ಮಣ್ಣು ಔಷಧೀಯ ಗುಣವನ್ನು ಹೊಂದಿರುವಂತದ್ದು. ಎಳೆಯರನ್ನು ಮಣ್ಣಿನೊಂದಿಗೆ ಬೆರೆಯಲು ಬಿಡಬೇಕು ಎಂದರು.
ಮೂಡುಬಿದಿರೆ ಗಾಣಿಗರ ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದರು. ಗಾಣದ ಕೊಟ್ಟಿಗೆಗಳನ್ನು ಉಳಿಸುವ ಚಿಂತನೆ ಮಾಡಿದ್ದೇವೆ. ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಹಡೀಲು ಬಿದ್ದ ಕೃಷಿಭೂಮಿಗಳಲ್ಲಿ ಬೇಸಾಯವನ್ನು ಮಾಡುವ ಚಿಂತನೆ ಸಂಘದ ಮುಂದಿದೆ ಎಂದರು.
ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಹರೀಶ್ ಕಾಪಿಕಾಡ್ ಮುಖ್ಯ ಅತಿಥಿಗಳಾಗಿದ್ದರು.
ಯುವ ವೇದಿಕೆಯ ಅಧ್ಯಕ್ಷ ನವೀನ್ ಪುತ್ರನ್, ಮಹಿಳಾ ವೇದಿಕೆಯ ಅಧ್ಯಕ್ಷೆ ಅಶ್ವಿನಿ ಪ್ರತಾಪ್, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಸಿಂಚನಾ, ರವಿ ಗುರುಬೆಟ್ಟು ದಂಪತಿ ಉಪಸ್ಥಿತರಿದ್ದರು.
ಸಂಧ್ಯಾ ಸಂದೀಪ್, ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಪ್ರತಾಪ್ ಬೆಟ್ಕೇರಿ ವಂದಿಸಿದರು.
0 Comments