ಮೂಡುಬಿದಿರೆ: ಕ.ಸಾ.ಪ.ಮೂಡುಬಿದಿರೆ ತಾಲೂಕು ಘಟಕವು ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಮನೆಯಂಗಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನುಡಿ ಪ್ರಚಾರಕರ ಗೌರವ ಸನ್ಮಾನ ಕಾರ್ಯಕ್ರಮವನ್ನು ಸಾಹಿತಿ ಸುಮಂಗಲಾ ಕಿಣಿಯವರ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಅನುಭವ,ಸೃಜನಶೀಲತೆಯಿಂದ ಸಶಕ್ತ ಸಾಹಿತ್ಯ ಮೂಡಿ ಬರಲು ಸಾಧ್ಯ. ಮನಸ್ಸಿಗೆ ನಾಟುವ ಸಂಗತಿಗಳು, ಅಂತರಂಗದ ತುಮುಲಗಳೇ ಸಾಹಿತ್ಯದ ರೂಪವನ್ನು ಪಡೆದುಕೊಳ್ಳುತ್ತವೆ. ಅನಾರೋಗ್ಯದ ಮಧ್ಯೆಯೂ ತಮ್ಮ ಮನದ ಭಾವನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸುವ ಕಾರ್ಯ ಅಭಿನಂದನೀಯ ಎಂದರು.
ಗೌರವ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಸುಮಂಗಲಾ ಕಿಣಿ ಅವರಿಗೆ ನುಡಿ ಗೌರವ ಸಲ್ಲಿಸಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಸಕ್ತಿ, ಸಕಾರಾತ್ಮಕ ಮನೋಭಾವ ಹಾಗೂ ಪ್ರಬಲ ಇಚ್ಛಾಶಕ್ತಿಯಿಂದಾಗಿ ಸಾಹಿತ್ಯ ದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅವರು ಶೀಘ್ರ ಗುಣಮುಖರಾಗಿ ಇನ್ನಷ್ಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡುವಂತಾಗಲಿ ಎಂದು ಹಾರೈಸಿದರು.
ಸುಮಂಗಲಾ ಕಿಣಿಯವರನ್ನು ಕ.ಸಾ.ಪ.ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಸುಮಂಗಲಾ ಕಿಣಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡು ಒಂದು ಕವನವನ್ನು ವಾಚಿಸಿದರು.
ಕ.ಸಾ.ಪ.ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.
ಸುಮಂಗಲಾ ಕಿಣಿ ಅವರ ಪತಿ ಉಮೇಶ ಕಿಣಿ, ಪುತ್ರ ಪುತ್ರಿ ಉಪಸ್ಥಿತರಿದ್ದರು
ಗೌ.ಕಾರ್ಯದರ್ಶಿ ಸುಧಾರಾಣಿ ಕೆ.ಅವರು ಸ್ವಾಗತಿಸಿ ವಂದಿಸಿದರು.ಕ.ಸಾ.ಪ.ದ ಪದಾಧಿಕಾರಿಗಳು ಮತ್ತು ಅನೇಕ ಸಾಹಿತ್ಯಾಸಕ್ತರು ಈ ಸಂದರ್ಭದಲ್ಲಿದ್ದರು.
0 Comments