ಮೂಡುಬಿದಿರೆ: ತೀವ್ರವಾಗಿ ಹದಗೆಟ್ಟ ಆರೋಗ್ಯ, ಸಹಿಸಲಾಗದ ನೋವು, ಉಬ್ಬಿಕೊಂಡ ಹೊಟ್ಟೆ ಹೀಗೆ ಅನಾರೋಗ್ಯದಲ್ಲಿ ಬಳಲುತ್ತಿದ್ದ 8ರ ಹರೆಯದ ಬಾಲೆ ಲಕ್ಷಾಳಿಗೆ ಇತ್ತೀಚೆಗೆ ಲಿವರ್ ಸಮಸ್ಯೆ ಬಾಧಿಸಿತ್ತು. ಹೆತ್ತ ತಾಯಿಯೇ ಲಿವರ್ ದಾನ ಮಾಡುವ ನಿರ್ಧಾರ ಮಾಡಿದ್ದರಿಂದ ಬಾಲಕಿಯನ್ನು ಶಸ್ತ್ರಚಿಕಿತ್ಸೆಗಾಗಿ ಮಣಿಪಾಲದಿಂದ ಬೆಂಗಳೂರಿನ ಕೆ. ಎಂ. ಸಿ ಆಸ್ಪತ್ರೆಗೆ ವಿಶೇಷ ಆಂಬುಲೆನ್ಸ್ ನಲ್ಲಿ ಸೋಮವಾರ ಸಂಜೆ ಕರೆದುಕೊಂಡು ಹೋದರೂ ಬಾಲಕಿ ಬದುಕಿ ಉಳಿಯಲಿಲ್ಲ.
ಬೆಂಗಳೂರಿನ ಆಸ್ಪತ್ರೆಗೆ ತಲುಪಿದ ಕೂಡಲೇ ತೀವ್ರ ನಿಗಾ ಘಟಕಕ್ಕೆ ದಾಖಲಾದ ಬಾಲಕಿ ಲಕ್ಷಾ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾಳೆ.
ಮೂಡುಬಿದಿರೆಯ ಉಡ್ಕೋ ನಿವಾಸಿ, ವರ್ತಕ ಉಮೇಶ್ ಪೂಜಾರಿ ಆಶಾ ದಂಪತಿಯ ಪುತ್ರಿ ಲಕ್ಷಾ ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದ ಬಳಲಿದ್ದಳು. ಹಲವು ಆಸ್ಪತ್ರೆಗಳಿಗೆ ಅಲೆದಾಡಿ ಟಿ ಖರ್ಚು ಮಾಡಿದರೂ ಸಮಸ್ಯೆ ಪರಿಹಾರ ಕಂಡಿರಲಿಲ್ಲ. ಪುತ್ರಿಯ ಲಿವರ್ ಬದಲಾಯಿಸಬೇಕು ಎನ್ನುವ ಆಘಾತಕಾರಿ ಸುದ್ದಿ ಉಮೇಶ್ ಕುಟುಂಬವನ್ನೇ ನಡುಗಿಸಿತ್ತು. ಇದ್ದ ಚಿನ್ನಾಭರಣಗಳನ್ನೆಲ್ಲ ಮಾರಿ ಕಂಗಾಲಾಗಿದ್ದ ಕುಟುಂಬಕ್ಕೆ ಲಿವರ್ ಟ್ರಾನ್ಸ್ಪೋಟ್ ಚಿಕಿತ್ಸೆಗೆ ಹೊಂದಿಸುವುದು ಕನಸಿನ ಮಾತಾಗಿತ್ತು.
ಸ್ಥಳೀಯ ಹುಡ್ಕೋ ನಿವಾಸಿಗಳು, ಇನ್ನಿತರರು ತಮ್ಮ ಸಂಘಟನೆಯ ಮೂಲಕ ನೆರವಿಗೆ ಮಗುವನ್ನು ಮುಂದಾಗಿದ್ದರು. ಎರಡು ದಿನಗಳ ಹಿಂದಷ್ಟೇ ಯೂಸುಫ್ ಮಾಡೂರು ಬಳಗದವರು ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ನೆರವಿಗೆ ಹಾಕಿದ್ದ ಪೋಸ್ಟ್ನಿಂದ ಉಮೇಶ್ ಕುಟುಂಬಕ್ಕೆ ಧನಸಹಾಯ ಹರಿದು ಬರಲಾರಂಭಿಸಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿದ್ದರಿಂದ ಲಕ್ಷಾ, ಕೊನೆಯುಸಿರೆಳೆದಿದ್ದಾಳೆ.
ತನ್ನ ಕರುಳ ಕುಡಿಯ ಸಂಕಟ ನೋಡಲಾಗದೇ ಕೊನೆಗೂ ತನ್ನ ಲಿವರ್ ದಾನಕ್ಕೆ ಮುಂದಾಗಿದ್ದರು ಲಕ್ಷಾಳ ತಾಯಿ ಆಶಾ. ಆದರೆ ಕೊನೆಯ ಕ್ಷಣದಲ್ಲಿ ಮಗುವನ್ನು ಉಳಿಸಿಕೊಳ್ಳಲು ಅವರಿಗೂ ಸಾಧ್ಯವಾಗಿಲ್ಲ. ಆಶಾ ಅವರು ತನ್ನ ಮೊದಲ ಹೆಣ್ಣು ಮಗುವನ್ನೂ ಮೂರು ತಿಂಗಳ ಮಗುವಾಗಿದ್ದಾಗಲೇ ಕಳೆದು ಕೊಂಡಿದ್ದರು. ಇದೀಗ ಎರಡನೇ ಮಗುವನ್ನೂ ಕಳೆದುಕೊಂಡಿದ್ದಾರೆ.
ಮಣಿಪಾಲದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲು ಹಾಗೂ ಅದೀಗ ಮೃತದೇಹವನ್ನು ಮರಳಿ ತರುವಲ್ಲಿಯೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉಳ್ಳಾಲ ಶಾಸಕ, ಮಾಜಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸಕಾಲಿಕ ನೆರವು 108 ಇಲಾಖೆಯ ಅಧಿಕಾರಿಗಳ ಮಾನವೀಯ ಸ್ಪಂದಿಸಿದ್ದಾರೆ.
0 Comments