*ವಿವಿಧ ಗ್ರಾಮೀಣ ಕ್ರೀಡಾಕೂಟ, ಬೆದ್ರ ತುಳುಕೂಟದಿಂದ ಸಾಂಸ್ಕೃತಿಕ ಕಾಯ೯ಕ್ರಮ
ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಭಾನುವಾರ ರಾಜ್ಯಮಟ್ಟದ ಈಶಾ ಗ್ರಾಮೋತ್ಸವ-ರೂರಲ್ ಪ್ರೀಮಿಯರ್ ಲೀಗ್ 2026 ಕಾಯ೯ಕ್ರಮ ನಡೆಯಿತು.
ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕಾಯ೯ಕ್ರಮವನ್ನು ಉದ್ಘಾಟಿಸಿ ಆಶೀವ೯ಚನ ನೀಡಿ ಕ್ರೀಡೆ ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಬೆಳೆಸಿದರೆ, ಯೋಗ ಶರೀರ-ಮನಸ್ಸಿನ ಶಕ್ತಿ ಹಾಗೂ ಜಾಗೃತಿ ಹೆಚ್ಚಿಸುತ್ತದೆ. ಸದ್ಗುರುಗಳ ಆಶಯದಂತೆ ಈಶ ಫೌಂಡೇಷನ್ ಭಾರತೀಯ ಅಧ್ಯಾತ್ಮ ಚಿಂತನೆಯ ಮೂಲಕ ಜೀವನ ಶಿಕ್ಷಣವನ್ನು ನೀಡುತ್ತಿರುವುದು ಮಾದರಿ ಸೇವೆ ಎಂದು ನುಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಪ್ರಧಾನ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ರೀಡೆ ದೇಹವನ್ನು ಸದೃಢಗೊಳಿಸಿದರೆ, ಯೋಗ ಮನಸ್ಸನ್ನು ಸ್ಥಿರಗೊಳಿಸುತ್ತದೆ; ಇವೆರಡರ ಸಮನ್ವಯ ಜಾಗೃತ ಜೀವನ ಹಾಗೂ ಉನ್ನತ ಮಾನವೀಯತೆಗೆ ದಾರಿ ತೋರಿಸುತ್ತದೆ ಎಂದರು.
ತುಳು ಕೂಟ ಬೆದ್ರ ಅಧ್ಯಕ್ಷ ಧನಕೀರ್ತಿ ಬಲಿಪ, ಈಶಾ ಸ್ವಯಂಸೇವಕಿ ಲತಾ ಬೆಂಗಳೂರು, ಸ್ವಯಂಸೇವಕ ಚಿತ್ತರಂಜನ್ ಮೂಡುಬಿದಿರೆ ಉಪಸ್ಥಿತರಿದ್ದರು. ಈಶಾ ಸ್ವಯಂಸೇವಕ ಸಭ್ಯತ್ ಶೆಟ್ಟಿ ಮಣಿಪಾಲ ಸ್ವಾಗತಿಸಿ ನಿರೂಪಿಸಿದರು.
ಕ್ಲಸ್ಟರ್ ಮಟ್ಟದಲ್ಲಿ ಗೆದ್ದ 9 ಜಿಲ್ಲೆಗಳ 18 ತಂಡಗಳು ಪುರುಷರ ವಾಲಿಬಾಲ್ ಹಾಗೂ 6 ಜಿಲ್ಲೆಗಳ 12 ತಂಡಗಳು ಮಹಿಳೆಯರ ತ್ರೋಬಾಲ್ ವಿಭಾಗದಲ್ಲಿ ಭಾಗವಹಿಸುತ್ತಿವೆ. ಸೆ.4ರಿಂದ 6ರವರೆಗೆ ಕೊಯಮುತ್ತೂರಿನ ಈಶ ಯೋಗಕೇಂದ್ರದಲ್ಲಿ ಅಂತಿಮ ಹಂತದ ಸ್ಪರ್ಧೆಗಳು ನಡೆಯಲಿವೆ ಎಂದು ಸಭ್ಯತ್ ಶೆಟ್ಟಿ ತಿಳಿಸಿದರು.
ಮೂಡುಬಿದಿರೆ ತಾಲೂಕು ವಾಲಿಬಾಲ್ ಎಸೋಸಿಯೇಶನ್ ಅಧ್ಯಕ್ಷ ಡಾ. ವಿನಯ್ ಆಳ್ವ ಹಾಗೂ ಸ್ವಯಂಸೇವಕಿ ಲತಾ ಅಂಗಣದ ಆಟಗಳಿಗೆ ಚಾಲನೆ ನೀಡಿದರು. ಜಾನಪದ ನೃತ್ಯ, ಗೋಣಿ ಚೀಲದ ಓಟ, ಸೈಕಲ್ ಟೈರ್ ಓಟ ಹಾಗೂ ಲಿಂಬೆಹಣ್ಣು-ಚಮಚ ಸಹಿತ ಓಟ ನಡೆಯಿತು. ಅಪರಾಹ್ನ ತುಳು ಕೂಟ ಬೆದ್ರದವರಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡಿತು.

0 Comments