ಬೆದ್ರ ಜೈನಮಠ ‘ಶ್ರೀಕೃಷ್ಣ ಸಂಧಾನ’ ತಾಳಮದ್ದಳೆ- ಅಜಯ್ ದೀಕ್ಷಿತ್ ಶೆಟ್ಟಿಗೆ ಸನ್ಮಾನ

ಬೆದ್ರ ಜೈನಮಠ ‘ಶ್ರೀಕೃಷ್ಣ ಸಂಧಾನ’ ತಾಳಮದ್ದಳೆ- ಅಜಯ್ ದೀಕ್ಷಿತ್ ಶೆಟ್ಟಿಗೆ ಸನ್ಮಾನ

ಮೂಡುಬಿದಿರೆ: ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ಶ್ರಾವಣಶ್ರವ್ಯ-ವಾಙ್ಮಯೋತ್ಸವದ ‘ಶ್ರೀಕೃಷ್ಣ ಸಂಧಾನ’ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮವು  ಜೈನ ಮಠದ ಸಭಾಂಗಣದಲ್ಲಿ ನಡೆಯಿತು. 

ಮೂಡುಬಿದಿರೆ ಶ್ರೀ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪಂಚಭೂತ ಮತ್ತು ಪಂಚೇಂದ್ರಿಯ ತತ್ವಗಳ ಪಾರಮಾರ್ಥಿಕ ಸತ್ಯ ಹಾಗೂ ಕರ್ಮಸಿದ್ಧಾಂತವನ್ನು ವಿಸ್ತರಿಸಿ ತಿಳಿಸುವ ಯಕ್ಷಗಾನ ತಾಳಮದ್ದಳೆ, ಸನಾತನ ಧರ್ಮದ ಭಾರತೀಯ ದರ್ಶನದ ಪ್ರವೇಶಕ್ಕೆ ಸುಲಭ ಮಾರ್ಗವಾಗಿದೆ ಎಂದು  ಹೇಳಿದರು.

 ಯಕ್ಷಗಾನದ ಮೂಲಕ ಪ್ರೇಕ್ಷಕರಲ್ಲಿ ಸುಪ್ತವಾಗಿರುವ ಜ್ಞಾನದ ಅಮೃತಧಾರೆಯನ್ನು ಪಡೆಯಲು ಸಾಧ್ಯವಾಗುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನೂಮಂತ ದೇವಸ್ಥಾನದ ಮೊಕ್ತೇಸರ, ಹಿರಿಯ ಸಹಕಾರಿ ಧುರೀಣ ಪಡುಮಾರ್ನಾಡು ದಯಾನಂದ ಪೈ ಮಾತನಾಡಿ, ಮೂಡುಬಿದಿರೆಯಲ್ಲಿರುವ ಆಮ್ನಾಯಃ ಯಕ್ಷ ಬಳಗ ಸೇರಿದಂತೆ 10ಕ್ಕೂ ಹೆಚ್ಚಿನ ಯಕ್ಷಗಾನ ಸಂಘಟನೆಗಳು ಸನಾತನ ಧರ್ಮದ ಹಿರಿಮೆ-ಗರಿಮೆಯನ್ನು ಬಿತ್ತರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ ಎಂದರು.

ಜನರಲ್ಲಿ ಸಂಸ್ಕೃತಿ ಮತ್ತು ಸಾತ್ವಿಕತೆಯನ್ನು ಉಂಟುಮಾಡುವಲ್ಲಿ ಈ ಸಂಘಟನೆಗಳು ಶ್ರಮಿಸುತ್ತಿರುವುದನ್ನು ದಯಾನಂದ ಪೈ ಶ್ಲಾಘಿಸಿದರು. ಸಂಘಟಕ ಡಾ. ವಿನಾಯಕ ಭಟ್ ಅವರ ಬಹುಮುಖ ಪ್ರತಿಭೆಯನ್ನು ಅಭಿನಂದಿಸಿದರು.

ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಪಾರ ಪ್ರೋತ್ಸಾಹ ನೀಡುತ್ತಿರುವ ಹಾಗೂ ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಯಕ್ಷಗಾನ ಸೇರಿದಂತೆ ವಿವಿಧ ಕಲಾಪ್ರಕಾರಗಳ ಪ್ರೋತ್ಸಾಹಕರಾದ ಮೂಡುಬಿದಿರೆಯ ಯುವ ಉದ್ಯಮಿ ರುದ್ರಾಂಶ್ ಕನ್ಸ್ಟ್ರಕ್ಷನ್‌ನ ಅಜಯ್ ದೀಕ್ಷಿತ್ ಶೆಟ್ಟಿ ಅವರನ್ನು ಫಲಪುಷ್ಪ ಮತ್ತು ಸ್ಮರಣಿಕೆಯೊಂದಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಯಕ್ಷಗಾನ ಸಂಘಟಕ, ವಿಮರ್ಶಕ ಎಂ. ಶಾಂತರಾಮ ಕುಡ್ವ ಉಪಸ್ಥಿತರಿದ್ದು ಶುಭ ಹಾರೈಸಿದರು.

ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗದ ಸಂಚಾಲಕ ಡಾ. ವಿನಾಯಕ ಭಟ್ ಗಾಳಿಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾಗವತ ಶಿವಪ್ರಸಾದ್ ಭಟ್ ಕಾಂತಾವರ ನಿರೂಪಿಸಿದರು.

Post a Comment

0 Comments