ಏರ್‌ಪೋರ್ಟ್ ಅದಾನಿಗೆ ಮಾರಾಟ ಮಾಡಿಲ್ಲ - ಶಾಸಕ ಕೋಟ್ಯಾನ್ ಆಕ್ರೋಶ

ಏರ್‌ಪೋರ್ಟ್ ಅದಾನಿಗೆ ಮಾರಾಟ ಮಾಡಿಲ್ಲ - ಶಾಸಕ ಕೋಟ್ಯಾನ್ ಆಕ್ರೋಶ

ಮೂಡುಬಿದಿರೆ : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ವ್ಯವಸ್ಥೆಯು ಸರ್ವಾಧಿಕಾರ ಧೋರಣೆ ತಾಳುತ್ತಿದ್ದು ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ.
ಏರ್‌ಪೋರ್ಟನ್ನು ಅದಾನಿಗೆ ಮಾರಾಟ ಮಾಡಿಲ್ಲ. ಲೀಸ್‌ಗೆ ನೀಡಿರುವುದು ಎಂಬುದು ಗಮನದಲ್ಲಿರಲಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಏರ್‌ಪೋರ್ಟ್‌ನಿಂದ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿರುವುದು ಮಾತ್ರವಲ್ಲ, ಸ್ಥಳೀಯ ಶಾಸಕರಿಗೂ ಯಾವುದೇ ಗೌರವ ನೀಡುತ್ತಿಲ್ಲ. ತುಳುನಾಡಿಗೆ ಬರುವ ಪ್ರವಾಸಿಗರಿಗೆ ಸ್ವಾಗತ ಕೋರಿ ಏರ್‌ಪೋರ್ಟ್ ರಸ್ತೆಯ ಪಟ್ಟಣ ಪಂಚಾಯತ್ ಜಾಗದಲ್ಲಿ ಅಭಿನಂದನಾ ಫಲಕ ಹಾಕಿದ್ದನ್ನು ಮೂಲೆಗೆ ಎಸೆದು ಆಭರಣ ಸಂಸ್ಥೆಯೊಂದರ ಜಾಹೀರಾತು ಅಳವಡಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ, ೧೫ ದಿನಗಳಲ್ಲಿ ಹಾಕುವುದಾಗಿ ಹೇಳಿ ೨ ವರ್ಷವಾದರೂ ಹಾಕಿಲ್ಲ. ರಿಕ್ಷಾದವರು ಪಿಕ್‌ಅಪ್ ಮಾಡಿ ಬರಬೇಕಾದರೆ ಹಣ ಪಾವತಿಸಬೇಕು. ಏರ್‌ಪೋರ್ಟ್‌ನವರಿಗೆ ೧೦೦ ರೂ. ಕೊಡಬೇಕು. ಟ್ಯಾಕ್ಸಿಯವರು ೧೮ ಲಕ್ಷಕ್ಕೂ ಅಧಿಕ ಪಾವತಿಸುತ್ತಾರೆ ಆದರೆ ಅವರಿಗೆ ಅಲ್ಲಿ ನಿಲುಗಡೆಗೆ ಅವಕಾಶವಿಲ್ಲ. ಮಳೆ ಬಂದಾಗ ನೀರು ಮನೆಗಳಿಗೆ ಹರಿಯುತ್ತಿದ್ದರೂ ಏರ್‌ಪೋರ್ಟ್‌ನವರು ಸ್ಪಂದಿಸುವುದಿಲ್ಲ ಎಂದು ದೂರಿದ ಶಾಸಕರು,ಸಂಸದರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

Post a Comment

0 Comments

Advertisement