ಉದ್ಯಮ ಯಶಸ್ಸಿಗೆ ನೈತಿಕತೆ, ನಾಯಕತ್ವ ಅಗತ್ಯ- ರಶ್ಮಿತಾ ಜೈನ್

ಉದ್ಯಮ ಯಶಸ್ಸಿಗೆ ನೈತಿಕತೆ, ನಾಯಕತ್ವ ಅಗತ್ಯ- ರಶ್ಮಿತಾ ಜೈನ್
ಮೂಡುಬಿದಿರೆ: ಶಿಕ್ಷಣವು ಕೇವಲ ಉದ್ಯೋಗ ಗಳಿಸುವ ಸಾಧನವಾಗದೆ, ವ್ಯಕ್ತಿತ್ವವನ್ನು ರೂಪಿಸುವ, ಸಮಾಜವನ್ನು ಮುನ್ನಡೆಸುವ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವ ಶಕ್ತಿಯಾಗಿದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.

ಎಕ್ಸಲೆಂಟ್ ಸೈನ್ಸ್ ಆ್ಯಂಡ್ ಕಾಮರ್ಸ್ ಪಿಯು ಕಾಲೇಜಿನ 2026–27ನೇ ಸಾಲಿನ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಅಂಕಗಳ ಗಳಿಕೆಗೆ ಮಾತ್ರ ಸೀಮಿತರಾಗದೆ ಸಮಯಪಾಲನೆ, ಪ್ರಾಮಾಣಿಕತೆ, ಶಿಸ್ತು, ನಾಯಕತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು ಎಂದರು. 

ಸರೋಜಾ ಫುಡ್ ಇಂಡಸ್ಟ್ರೀಸ್ ಹಾಗೂ ವರ್ಧಮಾನ ಫ್ಯಾಬ್ರಿಕೇಶನ್ ಮಾಲಕರಾದ ಪದ್ಮಪ್ರಸಾದ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಪರಿಶ್ರಮ, ಆತ್ಮವಿಶ್ವಾಸ ಮತ್ತು ನವೋದ್ಯಮದ ಮನೋಭಾವದೊಂದಿಗೆ ಮುನ್ನಡೆದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.


ಗೌರವ ಅತಿಥಿಯಾಗಿ ಭಾಗವಹಿಸಿದ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ನಾಗಲಕ್ಷ್ಮಿ ಕಾಫೀ ವರ್ಕ್ಸ್ ಆಂಡ್ ಟ್ರೇಡರ್ಸ್ ಮಾಲಕ ಅನೀಶ್ ಜೈನ್, ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡು, ಗುರಿ ಸ್ಪಷ್ಟವಾಗಿದ್ದರೆ ಯಶಸ್ಸು ಖಚಿತ. ಸೋಲು ಅಂತ್ಯವಲ್ಲ. ಬದ್ಧತೆಯುಳ್ಳ ಪ್ರಯತ್ನ ಮತ್ತು ಏಕನಿಷ್ಠೆ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಎಕ್ಸಲೆಂಟ್ ಸಂಸ್ಥೆಯ ವಾಣಿಜ್ಯ ವಿಭಾಗ ವಿದ್ಯಾರ್ಥಿಗಳನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಪುಷ್ಪರಾಜ್, ಸರೋಜಾ ಫುಡ್ ಇಂಡಸ್ಟ್ರೀಸ್ ಹಾಗೂ ವರ್ಧಮಾನ ಫ್ಯಾಬ್ರಿಕೇಶನ್ ಸಹ ಮಾಲಕರಾದ ಮಹಾವೀರ ಜೈನ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಉಪನ್ಯಾಸಕರು, ವಿದ್ಯಾರ್ಥಿಗಳು, ವಾಣಿಜ್ಯ ಸಂಘದ ಅಧ್ಯಕ್ಷ ಚಿರಂತ್ ವಿ. ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಶ್ರೀರಕ್ಷಾ ಸ್ವಾಗತಿಸಿದರು. ತನು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments