ಮೂಡುಬಿದಿರೆ : ಫಲ್ಗುಣಿ ನದಿಯ ಹನ್ನೆರಡು ಕವಲಿನ ಬೊಲ್ಲೇರ್ ಬಳಿ ನದಿ ಪಾತ್ರದ ಮರಳನ್ನು ಅಕ್ರಮ ಗಣಿಗಾರಿಕೆ ನಡೆಸಲು ಹುನ್ನಾರ ನಡೆಯುತ್ತಿದ್ದು ಇದನ್ನು ತಡೆಯುವಂತೆ ಮಾರೂರು ಗ್ರಾಮದ ನಿವಾಸಿಗಳು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಳೆದ ಐದಾರು ವಷ೯ಗಳಿಂದ ಫಲ್ಗುಣಿ ನದಿಯಲ್ಲಿ ಮೂಡುಬಿದಿರೆಯ ಶಾಸಕರ ಆಪ್ತರೆನಿಸಿಕೊಂಡವರು ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ಸಾವಿರಾರು ಲೋಡು ಮರಳನ್ನು ಹಿಟಾಚಿ, ಟಿಪ್ಪರ್ ಮತ್ತು ಡ್ರೆಜ್ನಿಂಗ್ ಮೆಶಿನ್ ಹಾಕುವ ಮೂಲಕ ಅಕ್ರಮವಾಗಿ ಮರಳು ಸಾಗಾಟ ಮಾಡಿದ್ದಾರೆ. ಇದಕ್ಕೆ ಗಣಿ ಇಲಾಖೆಯವರ ಪರೋಕ್ಷ ಬೆಂಬಲವೂ ಇದೆ ಅವರೇ ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈ ವಷ೯ವೂ ನದಿ ತಟದಲ್ಲಿ ಸರಕಾರಿ ಯೋಜನೆೆಯ ಬಗ್ಗೆ ಮರಳು ತೆಗೆಯಲು ಜಿಲ್ಲಾಧಿಕಾರಿಯವರಿಂದ ತಮಗೆ ಅನುಮತಿ ಸಿಕ್ಕಿದೆ ಎಂದು ಹೇಳಿ ಅದರ ಪೂವ೯ ತಯಾರಿಯಾಗಿ ಕಾಮಿ೯ಕರ ಶೆಡ್ ಇನ್ನಿತರ ತಯಾರಿ ಮಾಡುತ್ತಿದ್ದಾರೆ. ಈ ಕೆಲಸದ ಜವಾಬ್ದಾರಿಯನ್ನು ಕಳೆದ ಐದಾರು ವಷ೯ಗಳಿಂದ ಮರಳು ಕಳ್ಳತನ ಮಾಡಿದವರೇ ನಿವ೯ಹಿಸುತ್ತಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮರಳು ಕಳ್ಳತನದ ಸಂಪೂರ್ಣ ಸಾಧ್ಯತೆಯಿದ್ದು ಇದರಿಂದ ಫಲ್ಗುಣಿ ನದಿಪಾತ್ರದ ರೈತರಿಗೆ ಕೃಷಿ ಮತ್ತು ಕುಡಿಯುವ ನೀರಿನ ಅಭಾವವಾಗಲಿದೆ ಮಾತ್ರವಲ್ಲದೆ ಸರಕಾರಿ ಆಸ್ತಿಯೂ ಕಬಳಿಕೆಯ ಆತಂಕವೂ ಮನೆ ಮಾಡಿದೆ ಆದುದರಿಂದ ತಾವು ಈ ಭಾಗದ ಜನರ ಜತೆಯಿದ್ದು ಈ ಸಮಸ್ಯೆಯಿಂದ ಪಾರು ಮಾಡಲು ಸಹಕರಿಸುವಂತೆ ಅಭಯಚಂದ್ರ ಅವರಲ್ಲಿ ವಿನಂತಿಸಿದ್ದಾರೆ.


0 Comments