ಪ್ರೇರಣಾ ಸೇವಾ ಟ್ರಸ್ಟ್ ಕಾರ್ಯಾಲಯಕ್ಕೆ ಶಿಲಾನ್ಯಾಸ
ಮೂಡುಬಿದಿರೆ : ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸಹಿತ ಅನೇಕಾರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ಪ್ರೇರಣಾ ಸೇವಾ ಟ್ರಸ್ಟ್ ಹಿಂದೂ ಸಂಸ್ಕೃತಿಯ ಸಾರವನ್ನು ಮೈಗೂಡಿಸಿಕೊಂಡು ರಾಷ್ಟ್ರಹಿತದ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೆತ್ರೀಯ ಸಂಘಚಾಲಕರಾಗಿರುವ ಡಾ. ವಾಮನ ಶೆಣೈ ಹೇಳಿದರು.
ಅವರು ಕಡಲಕೆರೆ ಬಳಿಯ ಪ್ರೇರಣಾ ಟ್ರಸ್ಟಿನ ನಿಯೋಜಿತ ನೂತನ ಕಾರ್ಯಾಲಯ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.
ಶಾಸಕ, ಕಟ್ಟಡ ಸಮಿತಿಯ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸನಾತನ ಹಿಂದೂ ಧರ್ಮದ ಉಳಿವಿಗಾಗಿಯೇ ಜನ್ಮ ತಾಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಪ್ರೇರಣಾ ಶಿಶು ಮಂದಿರ ಹಾಗೂ ಶಾಲೆಯ ಪಕ್ಕದಲ್ಲಿಯೇ ಇರುವ ೦.೨೫ ಸೆಂಟ್ಸ್ ಜಮೀನಿನಲ್ಲಿ ಸುಮಾರು ಎರಡು ಕೋಟಿ ಅಂದಾಜು ವೆಚ್ಚದಲ್ಲಿ ಟ್ರಸ್ಟಿನ ನೂತನ ಕಾರ್ಯಾಲಯ ನಿರ್ಮಾಣಗೊಳ್ಳಲಿದ್ದು ಮುಂದಿನ ವಿಜಯದಶಮಿಯ ಸಂದಭ೯ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಟ್ರಸ್ಟಿನ ಅಧ್ಯಕ್ಷ ವಿವೇಕಾನಂದ ಕಾಮತ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಕಟ್ಟಡ ಸಮಿತಿಯ ಕಾಯಾ೯ಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಉಪಸ್ಥಿತರಿದ್ದರು.
ಮೂಕಾಂಬಿಕಾ ಭಟ್ ಪ್ರಾರ್ಥಿಸಿದರು. ಕಟ್ಟಡ ಸಮಿತಿಯ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೋಹನ್ ಕಲ್ಲಬೆಟ್ಟು ಅವರು ಸಂಘದ ಶತಾಬ್ದಿ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು. ಡಾ. ಕೇಶವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಜಿತ್ ಕುಮಾರ್ ವಂದಿಸಿದರು.




0 Comments