ಮೂಡುಬಿದಿರೆ ಶ್ರೀಗಳ ತಮಿಳುನಾಡು ಪ್ರವಾಸ
ಮೂಡುಬಿದಿರೆ: ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಎರಡು ದಿನಗಳ ತಮಿಳುನಾಡು ಧಾರ್ಮಿಕ ಪ್ರವಾಸ ಕೈಗೊಂಡರು.
ಸ್ವಾಮೀಜಿಯವರು ಧಾರ್ಮಿಕ ಸಮಾವೇಶಗಳಲ್ಲಿ ಭಾಗವಹಿಸಿ, ಹಲವಾರು ಐತಿಹಾಸಿಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದರು.
ತಿರುಚನಾಪಳ್ಳಿಯ ಬಿ.ಎಚ್.ಇ.ಎಲ್ನ ನಿವೃತ್ತ ಜಿ.ಎಂ. ಹಾಗೂ ಹಿರಿಯ ಇಂಜಿನಿಯರ್ ಜೀವಣ್ಣನವರ ಸತ್ಸಂಗದಲ್ಲಿ ಸ್ವಾಮೀಜಿಯವರು ಪಾಲ್ಗೊಂಡರು. ಬಳಿಕ, ಕುಂಭಕೋಣಂ ಸಮೀಪದ ಆದಿನಂ ಶೈವ ಸಂಸ್ಥಾನ ಮಠದ ಪರಮಾಚಾರ್ಯ ಶ್ರೀ ಕೈಲಾಯಿ ಮಸಿಲಮಣಿ ದೇಸಿಕ ಸ್ವಾಮೀಜಿಯವರ ಜನ್ಮದಿನದ ಸುವರ್ಣ ಮಹೋತ್ಸವ ಹಾಗೂ 27ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಸಂತ ಸಮಾವೇಶದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಸ್ವಾಮೀಜಿಯವರು, "ಧರ್ಮ ಕ್ಷೇತ್ರಗಳು ಮತ್ತು ಪ್ರಾಚೀನ ತೀರ್ಥಕ್ಷೇತ್ರಗಳು ಸನಾತನ ಧರ್ಮವನ್ನು ಒಗ್ಗೂಡಿಸುತ್ತವೆ. ಸುಸಂಸ್ಕೃತ ಮತ್ತು ಸಭ್ಯ ಸಮಾಜದ ನಿರ್ಮಾಣದಲ್ಲಿ ಭಾರತೀಯ ಸನಾತನ ಧರ್ಮದ ಕೊಡುಗೆಯು ವಿಶ್ವಮಾನ್ಯವಾಗಿದೆ," ಎಂದು ಪ್ರತಿಪಾದಿಸಿದರು.
ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರ ಪುರಿ ಸ್ವಾಮೀಜಿ, ಹರಿಹರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಳ್ಳಾರಿಯ ಕಲ್ಯಾಣ ಸ್ವಾಮೀಜಿ, ಬೆಂಗಳೂರಿನ ಓಂಕಾರ ಆಶ್ರಮದ ಮಧುಸೂದನ ಸ್ವಾಮೀಜಿ, ಕಟಪಾಡಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಸ್ವಾಮೀಜಿಯವರು ಮನ್ನಾರಗುಡಿ, ದೀಪಂಗುಡಿ ಮತ್ತು ತಂಜಾವೂರಿನ ಜೈನ ಬಸದಿ ಹಾಗೂ ವಿಶ್ವಪ್ರಸಿದ್ಧ ತಂಜಾವೂರು ಬೃಹದೇಶ್ವರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಈ ಧಾರ್ಮಿಕ ಪ್ರವಾಸದಲ್ಲಿ ರಾಮಕೃಷ್ಣ, ಬಾಬು, ರಾಜಶೇಖರ್ ಮತ್ತು ಶೀತಲ್ ಪ್ರಸಾದ್ ಸ್ವಾಮೀಜಿಯವರೊಂದಿಗೆ ಇದ್ದರು.




0 Comments