ಆಳ್ವಾಸ್‌ ವಿದ್ಯಾರ್ಥಿಗಳಿಂದ ಕಾರ್ಕಳದಲ್ಲಿ ಕೆಸರಾಟ ಪಾಠ ಶಿಕ್ಷಣ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಅನುಸಂಧಾನ -‌ ಡಾ. ಮಂಜುನಾಥ್ ಕೋಟ್ಯಾನ್‌


ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್‌ ವಿದ್ಯಾರ್ಥಿಗಳಿಂದ ಕಾರ್ಕಳದಲ್ಲಿ ಕೆಸರಾಟ ಪಾಠ


ಶಿಕ್ಷಣ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಅನುಸಂಧಾನ -‌ ಡಾ. ಮಂಜುನಾಥ್ ಕೋಟ್ಯಾನ್‌ 



ಕಾರ್ಕಳ : ಶಿಕ್ಷಣವೆಂದರೆ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಅನುಸಂಧಾನ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್‌ ಕೋಟ್ಯಾನ್‌ ಅಭಿಪ್ರಾಯಪಟ್ಟರು. 

ಅವರು ಆ. 10ರಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್, ರೇಂಜರ್ಸ್ ಘಟಕದ ವತಿಯಿಂದ ಕಾರ್ಕಳ ಅಂಬಾ ಭವಾನಿ ಗಾಳಿಮಾರಿ ದೇವಸ್ಥಾನದ ವಠಾರದಲ್ಲಿ ನಡೆದ ಕೆಸರಾಟ ಪಾಠ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಇವತ್ತು ಎಲ್ಲೆಡೆ ವಿದ್ಯಾರ್ಥಿಗಳಿಗಾಗಿ ಆಟಿಡೊಂಜಿ ದಿನ, ಕೆಸರಾಟದಂತಹ ಕೂಟಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ನಾವು ವಿದ್ಯಾರ್ಥಿಗಳಿದ್ದಾಗ ಇಂತಹ ಕಾರ್ಯಕ್ರಮಗಳಿರಲಿಲ್ಲ. ಅಂದಿನ ಬದುಕೇ ನೆಲದ ಮಣ್ಣಿನೊಂದಿಗಿತ್ತು, ಕೃಷಿ ಬದುಕು ನಮ್ಮದಾಗಿತ್ತು ಎಂದವರು ಹೇಳಿದರು. 


ಸಂತಸದ ಕ್ಷಣ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ ಮಾತನಾಡಿ, ವಿದ್ಯಾರ್ಥಿ ಜೀವನದ ಸಂತೋಷದ ಕ್ಷಣಗಳು ಎಂದೆಂದಿಗೂ ಸ್ಮರಣೀಯವಾಗಿರುವುದು. ಹಾಗಾಗಿ ಆ ಕ್ಷಣಗಳನ್ನು ಕಳೆದುಕೊಳ್ಳಬಾರದು ಎಂದರು. 


ವಿದ್ಯಾರ್ಥಿಗಳಿಗಾಗಿ ಹಗ್ಗಜಗ್ಗಾಟ, ಓಟ, ಬಾಲ್‌ ಪಾಸಿಂಗ್‌, ವಾಲಿಬಾಲ್‌, ಪಿರಮಿಡ್‌ ರಚನೆ, ತ್ರೋಬಾಲ್‌, ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಳೆ ವಿದ್ಯಾರ್ಥಿ ಜೀವನ್‌ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಮೇಘನಾ ಆಟೋಟ ಸ್ಪರ್ಧೆಗಳನ್ನು ನೆರವೇರಿಸಿಕೊಟ್ಟರು.  


ಉದ್ಯಮಿ ನಿರಂಜನ್ ಜೈನ್, ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ಅಮ್ಮನ ನೆರವು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ. ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ ಚಿಪಳೂಣಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ವಿಭಾಗದ ಉಪನ್ಯಾಸಕಿ ಡಾ. ರೂಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments