ವಿಧಿ ನೀನೆಷ್ಟು ಕ್ರೂರಿ....
ಅನಾರೋಗ್ಯದಿಂದ ಬಳಲುತ್ತಿದ್ದಾರೆ ಒಂದೇ ಕುಟುಂಬದ ಮೂವರು
ಮೂಡುಬಿದಿರೆ: ತಂದೆ, ತಾಯಿ ಹಾಗೂ ಪುತ್ರ ಹೀಗೆ ಒಂದೇ ಬಡ ಕುಟುಂಬದ ಮೂವರು ಅನಾರೋಗ್ಯಕ್ಕೆ ತುತ್ತಾಗಿ
ಅಸಹಾಯಕ ಪರಿಸ್ಥಿತಿಯಲ್ಲಿರುವುದು ಕಂಡು ಬಂದಿದೆ.
ಮೂಡುಬಿದಿರೆ ತಾಲೂಕಿನ ಪುರಸಭಾ ವ್ಯಾಪ್ತಿಯ ಮಾರೂರಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಈ ಕುಟುಂಬವಿದ್ದು ಚಿಕಿತ್ಸೆಯ ವೆಚ್ಚಕ್ಕಾಗಿ ಸಹಾಯಧನವನ್ನು ಅಂಗಲಾಚಿದೆ. ಮನೆಯ ಯಜಮಾನ ಸುರೇಶ್ ಕುಕ್ಯಾನ್ ಕಳೆದ ನಾಲ್ಕು ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಳಲುತ್ತಿದ್ದಾರೆ. ಅವರ ಪತ್ನಿ ಸುಮಿತ್ರಾ ನರ ದೌರ್ಬಲ್ಯಕ್ಕೆ ತುತ್ತಾಗಿ ಕಳೆದ ಹದಿನೈದು ವರ್ಷಗಳಿಂದ ಹಾಸಿಗೆಯಿಂದೇಳುತ್ತಿಲ್ಲ. ಇದೀಗ ಮೂಡುಬಿದಿರೆಯ ಖಾಸಗಿ ಹೈಸ್ಕೂಲ್ ಒಂದರಲ್ಲಿ ಒಂಭತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಮಗ ಸೃಜನ್ ಮೇಲೆ ವಿಧಿಯ ವಕ್ರದೃಷ್ಠಿ ಬಿದ್ದಿದ್ದು
ವಿದ್ಯಾಭ್ಯಾಸದ ಸಮಯದಲ್ಲೇ ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆಗೊಳಗಾಗಿ ಈತನೂ ಆಸ್ಪತ್ರೆಯಲ್ಲಿ ಮಲಗಿದ್ದು ಅಸಹಾಯಕ ಸ್ಥಿತಿಯಲ್ಲಿದ್ದಾನೆ.
ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ಈ 14 ರ ಹರೆಯದ ಬಾಲಕ ಮಂಗಳೂರಿನ ಎ.ಜೆ.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಹೇಳಿಕೊಳ್ಳಲಾಗದ ನೋವಿನಿಂದ ಮಲಗಿಕೊಂಡಿದ್ದಾನೆ. ಪ್ರೌಢಾವಸ್ಥೆಗೆ ಕಾಲಿಟ್ಟು ಕನಸುಗಳನ್ನು ಕಾಣಬೇಕಾದ ಈ ಹರೆಯದಲ್ಲೇ ವಿಧಿ ಈ ಬಾಲಕನನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿದೆ.
ಅಸಹಾಯಕ ಸ್ಥಿತಿಯಲ್ಲಿರುವ ಈ ಬಡಕುಟುಂಬದ ಬಾಲಕನ ಬದುಕು ಬೆಳಕಾಗಬೇಕಾದರೆ ನಿಮ್ಮೆಲ್ಲರ ಸಹಾಯ ಬೇಕಾಗಿದೆ. ಈತನ ಚಿಕಿತ್ಸೆಗೆ 20 ಲಕ್ಷ ರೂಪಾಯಿ ಬೇಕೆಂದು ಈಗಾಗಲೇ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಸಹೃದಯಿ ದಾನಿಗಳು, ಸಂಘ ಸಂಸ್ಥೆಗಳು ಈ ಬಾಲಕನ ನೆರವಿಗೆ ಮನಸ್ಸು ಮಾಡಬೇಕಾಗಿದೆ.
ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಕಳುಹಿಸಬಹುದು.
0 Comments