ರಜತ ಸಂಭ್ರಮದಲ್ಲಿ ಮೂಡುಬಿದಿರೆಯ ಯಕ್ಷ ಸಂಗಮ

ಜಾಹೀರಾತು/Advertisment
ಜಾಹೀರಾತು/Advertisment

 ರಜತ ಸಂಭ್ರಮದಲ್ಲಿ ಮೂಡುಬಿದಿರೆಯ ಯಕ್ಷ ಸಂಗಮ 

ಆ.10 ರಂದು ಯಕ್ಷಗಾನ, ತಾಳಮದ್ದಳೆ ಕೂಟ,  ಸೀತಾರಾಮ ಕುಮಾರ್ ಕಟೀಲ್ ಅವರಿಗೆ ಸನ್ಮಾನ


ರಜತ ಸಂಭ್ರಮದಲ್ಲಿರುವ ಮೂಡುಬಿದಿರೆಯ ಯಕ್ಷಸಂಗಮದ ವತಿಯಿಂದ  ಯಕ್ಷಗಾನ ಮತ್ತು ತಾಳಮದ್ದಳೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮವು  ಮೂಡುಬಿದಿರೆಯ ಸಮಾಜಮಂದಿರದಲ್ಲಿ ಆ.10ರಂದು ನಡೆಯಲಿದೆ ಎಂದು ಯಕ್ಷಸಂಗಮದ ಸಂಚಾಲಕ ಎಂ.ಶಾಂತಾರಾಮ ಕುಡ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 24 ವರ್ಷಗಳಿಂದ ಇಡೀ ರಾತ್ರಿ ತಾಳಮದ್ದಳೆ ಕೂಟ ಹಾಗೂ ಕಲಾವಿದರಿಗೆ ಸನ್ಮಾನ ನೆರವೇರಿಸುತ್ತಾ ಬಂದಿರುವ ಯಕ್ಷಸಂಗಮವು ಈ ಬಾರಿ ರಜತ ಸಂಭ್ರಮವನ್ನಾಚರಿಸುತ್ತಿದ್ದು ಪ್ರಸ್ತುತ ದಿನಗಳಲ್ಲಿ ಇಡೀ ರಾತ್ರಿ ತಾಳಮದ್ದಳೆ ಕೂಟವನ್ನು ಆಯೋಜಿಸುತ್ತಿರುವುದು ಯಕ್ಷ ಸಂಗಮ ಮಾತ್ರ ಎಂದವರು ಮಾಹಿತಿ ನೀಡಿದರು.

ಆ.10 ರಂದು ಸಾಯಂಕಾಲ 4 ಗಂಟೆಗೆ  ಮೂಡುಬಿದಿರೆ ಜೈನಮಠದ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಒರಿಸ್ಸದ ಟಾಟಾ ರಿಫ್ರಾಕ್ಟರೀಸ್ ಲಿಮಿಟೆಡ್ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ದೇವದಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಯಂಕಾಲ 4.30ರಿಂದ ಯಕ್ಷನಿಧಿ ಮೂಡುಬಿದಿರೆ ಮಕ್ಕಳ ಮೇಳದಿಂದ ದಕ್ಷಾದ್ವರ ಹಾಗೂ ರಾತ್ರಿ 8.15 ರಿಂದ ಗಿರಿಜಾ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಾಯಂಕಾಲ 6.45 ರಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ತೆಂಕು-ಬಡಗು ತಿಟ್ಟಿನ 'ಚಾರ್ಲಿ ಚಾಪ್ಲಿನ್' ಖ್ಯಾತಿಯ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ , ಡಾ.ಶ್ಯಾಮ ಭಟ್, ಡಾ.ಮೋಹನ ಆಳ್ವ, ಡಾ.ಪದ್ಮನಾಭ ಕಾಮತ್, ಕೆ.ಶ್ರೀಪತಿ ಭಟ್, ಎಂ.ವಿಜಯ ಶೆಣೈ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

  ರಾತ್ರಿ 9-30ರಿಂದ ಬೆಳಿಗ್ಗೆ 6 ರವರೆಗೆ ಸುಪ್ರಸಿದ್ಧ ಕಲಾವಿದರಿಂದ ಸೀತಾಪಹಾರ-ಸುಭದ್ರಾ ಕಲ್ಯಾಣ ಎಂಬ ತಾಳಮದ್ದಳೆ ನಡೆಯಲಿದೆ. ಪ್ರೇಕ್ಷಕರಿಗೆ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಕುಡ್ವ ಅವರು ಹೇಳಿದರು.

  ಯಕ್ಷಸಂಗಮದ ಅಧ್ಯಕ್ಷ ಸುದರ್ಶನ ಎಂ, ಸದಸ್ಯರಾದ ದಿವಾಕರ ಶೆಟ್ಟಿ ಹಾಗೂ ರಾಘವೇಂದ್ರ ಭಂಡಾರ್ಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Post a Comment

0 Comments