ಮೇ.4ರಂದು ವೇಣೂರಿನ ಬಾಹುಬಲಿಗೆ ಅಭಿಷೇಕ

 ಮೇ.4ರಂದು ವೇಣೂರಿನ ಬಾಹುಬಲಿಗೆ ಅಭಿಷೇಕ


ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕದ ಈ ಬಾರಿಯ ಕೊನೆಯ ಅಭಿಷೇಕವು ಮೇ.4ರಂದು ಶನಿವಾರ ನಡೆಯಲಿದ್ದು, ಕರ್ನಾಟಕ ಸೇರಿದಂತೆ ಮೂಡುಬಿದಿರೆ ಜೈನಮಠದ ವಿವಿಧ ಭಾಗದ ಶ್ರಾವಕ-ಶ್ರಾವಕಿಯರು ಪಾಲ್ಗೊಳ್ಳಲಿದ್ದಾರೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಜಲಾಭಿಷೇಕವು ಅಂದು ಸಾಯಂಕಾಲ 3ರಿಂದ 7ರವರೆಗೆ ನಡೆಯಲಿದೆ. ರಾತ್ರಿ 8ರಿಂದ 11ರವರೆಗೆ ಪಂಚಾಮೃತ ಅಭಿಷೇಕ ಜರಗಲಿದೆ. ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಶ್ರೀಗಳ ಮಾರ್ಗದರ್ಶನದಲ್ಲಿ ಮಸ್ತಕಾಭಿಷೇಕ ನಡೆಯಲಿದ್ದು ಭಗವಾನ್ ವೀರ ನಿರ್ವಾಣ ವರ್ಷ 2550ರ ನೆನಪಿಗೆ ನಡೆಯುವ ಈ ಮಸ್ತಕಾಭಿಷೇಕದಲ್ಲಿ ರಾಜ್ಯ ಹಾಗೂ ವಿದೇಶಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಎಂದರು. ರಾತ್ರಿ ಹೊರನಾಡು ಜಯಶ್ರೀ ಜೈನ್ ಬಳಗ ಭಕ್ತಿ ಸಂಗೀತ ನಡೆಸಿಕೊಡಲಿದೆ. ಸುಮಾರು 504 ಕಲಶಗಳನ್ನು ಉಚಿತವಾಗಿ ನೀಡಲಾಗಿದೆ. ಜೈನ ಸಮಾಜದ ಸರ್ವರು ಅಭಿಷೇಕದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಅಪೇಕ್ಷಿತರಿಗೆ ರೂ. ಒಂದು ಸಾವಿರ ಬೆಲೆಯ `ಸ್ವಸ್ತಿಶ್ರೀ ಕಲಶಗಳ ಕೂಪನ್ ವೇಣೂರು ಬಾಹುಬಲಿ ಬೆಟ್ಟದ ಕಚೇರಿಯಲ್ಲಿ ಲಭ್ಯ ಇದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸ್ವಾಮೀಜಿ ತಿಳಿಸಿದರು. 

ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ವಕೀಲ ಬಾಹುಬಲಿ ಪ್ರಸಾದ್, ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ್ ಹೆಗ್ಡೆ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಸೆಟ್ಟಿ, ಮೂಲ್ಕಿ ಅರಸ ಮನೆತನದ ಕೌಶಿಕ್ ಜೈನ್ ಸುದ್ದಿಗೋಷ್ಠಿಯಲ್ಲಿದ್ದರು.

Post a Comment

0 Comments

Advertisement