ಜಾಂಬೂರಿ ಪೂರ್ವಭಾವಿ ಸಭೆ ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಇಲ್ಲಿ ಡಿ.21-27ರವರೆಗೆ ನಡೆಯಲಿರುವ  ಸ್ಕೌಟ್ ಗೈಡ್ಸ್ ಅಂತಾರಾಷ್ಟ್ರೀಯ  ಸಾಂಸ್ಕೃತಿಕ ಜಾಂಬೂರಿಯ ಅಂಗವಾಗಿ ಮೂಡುಬಿದಿರೆಯಿಂದ ಬೃಹತ್ ಹೊರೆಕಾಣಿಕೆಯನ್ನು ನಡೆಸಬೇಕಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗುವಂತಹ ವಸ್ತುಗಳನ್ನೊಳಗೊಂಡ ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆಯನ್ನು ಪಕ್ಷಬೇಧ ಮೆರೆತು, ಸರ್ವಧರ್ಮೀಯರು ಕೈಗೊಳ್ಳಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಕರೆನೀಡಿದರು. 

    ಜಾಂಬೂರಿಯ ಅಂಗವಾಗಿ  ಸಂಜೆ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ  ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮೂಡುಬಿದಿರೆಯಲ್ಲಿ ನಡೆಯುವ ಜಾಂಬೂರಿ  ನಮ್ಮ ಕಾರ್ಯಕ್ರಮ. ಇದರ ಯಶಸ್ಸಿಗೆ ಪ್ರತಿಯೊಬ್ಬರ ಪಾತ್ರವೂ ಪ್ರಾಮುಖ್ಯ, ಮೂಡುಬಿದಿರೆಯ ನಾಗರಿಕರು ಈ ಕಾರ್ಯಕ್ರಮ ಸರ್ವ ರೀತಿಯಲ್ಲಿ ಯಶಸ್ಸು ಪಡೆಯಲು ಮನಪೂರ್ವಕವಾಗಿ  ಸಹಕಾರ ನೀಡಬೇಕೆಂದು ಆಶಿಸಿದರು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಸ್ಕೌಟ್ ಗೈಡ್ಸ್ ನ ದ.ಕ.ಜಿಲ್ಲಾ ಆಯುಕ್ತ  ಡಾ.ಎಂ.ಮೋಹನ ಆಳ್ವ ಮಾತನಾಡಿ ದೇಶ ವಿದೇಶದ ೫೦ಸಾವಿರ ವಿದ್ಯಾರ್ಥಿಗಳು, ಹತ್ತು ಸಾವಿರ ಶಿಕ್ಷಕರು ಪಾಲ್ಗೊಳ್ಳುವ ಜಾಂಬೂರಿ ಕಾರ್ಯಕ್ರಮ ಹತ್ತು ಹಲವು ರೀತಿಯ ದಾಖಲೆಗಳನ್ನು ಮಾಡಲಿದೆ. ಜಾಂಬೂರಿಯ ಇತಿಹಾಸದಲ್ಲೇ  ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರಿಗೂ ತೊಂದರೆಯಾಗದಂತೆ ಭೋಜನ ವ್ಯವಸ್ಥೆಯಿದೆ; ಹೀಗಾಗಿ ಪ್ರತಿಯೊಬ್ಬರೂ ವಸ್ತುರೂಪದಲ್ಲಿ, ಹಣದ ರೂಪದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವ ಅವಶ್ಯಕತೆ ಇದೆ ಎಂದರು.

ಇದೊಂದು ವಿಶೇಷ: ಹಿಂದೆಂದೂ ಜಾಂಬೂರಿ ಕಾರ್ಯಕ್ರಮದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಆದರೆ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳು , ಸಾಂಸ್ಕೃತಿಕ ಮೆರವಣಿಗೆ, ಕಾರ್ಯಕ್ರಮ ನಡೆಯುವ ನೂರೆಕ್ಕರೆ ಜಾಗ ಎಲ್ಲವೂ ಹಲವು ವೈಶಿಷ್ಟö್ಯತೆಗಳಿಂದ ಕೂಡಿರಲಿದೆ. ಏಳು ದಿನಗಳ ಕಾಲ ಬರುವ ಎಲ್ಲಾ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಹಲವು ಸೃಜನಶೀಲ ವ್ಯವಸ್ಥೆಗಳನ್ನು ಜಾಂಬೂರಿಯಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯಪೂರಕ, ವ್ಯಕ್ತಿತ್ವ ವಿಕಸನಕ್ಕೆ ಅನುವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ವೈಭವವೂ ನಭೂತೋ ಎಂಬಂತೆ ಸಂಪನ್ನಗೊಳ್ಳಲಿದೆ. ಕೃಷಿಮೇಳ, ಪುಸ್ತಕ ಮೇಳ, ವಿಜ್ಞಾನ ಮೇಳ, ಕಲಾ ಮೇಳ ಆಹಾರ ಮೇಳಗಳನ್ನು ಆಯೋಜಿಸಲಾಗಿದೆ. ವಿದ್ಯಾಗಿರಿಯ ಇಡೀ ಕ್ಯಾಂಪಸ್ ಜೀವಕಳೆಯೊಂದಿಗೆ ಕಂಗೊಳಿಸಲಿದೆ ಎಂದರು.

ಹಲವು ಕಡೆಗಳಿಂದ ಹೊರೆಕಾಣಿಕೆ: ಪುತ್ತೂರು, ಬಂಟ್ವಾಳ,ಬೆಳ್ತಂಗಡಿ,ಮಂಗಳೂರು, ಉಡುಪಿ ಸೇರಿದಂತೆ ಹಲವು ಕಡೆಗಳಿಂದ ಕಾರ್ಯಕ್ರಮದ ಯಶಸ್ಸಿಗಾಗಿ ಹಸಿರು ಹೊರೆಕಾಣಿಕೆ ವ್ಯವಸ್ಥೆ ಮಾಡುವುದಾಗಿ ಸ್ಥಳೀಯ ಶಾಸಕರು, ಸಮಾಜದ ಮುಖಂಡರು ವಾಗ್ದಾನ ಮಾಡಿರುವುದಾಗಿ  ಆಳ್ವ ಹೇಳಿದರು. ಇದೊಂದು ಮಾದರಿ ಮತ್ತು ನೆನಪುಳಿಯುವಂತಹ ಕಾರ್ಯಕ್ರಮವಾಗಿ ಮೂಡಿ ಬರಲಿ ಮೂಡುಬಿದಿರೆ ಸರ್ವ ಜನತೆ ಸಹಕರಿಸುವಂತೆ ಕರೆನೀಡಿದರು. 

ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಕೆಎಂಎಫ್ ನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಚೌಟರ ಅರಮನೆಯ ಕುಲದೀಪ್ ಎಂ,  ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಮಂಡಲಾಧ್ಯಕ್ಷ ಸುನೀಲ್ ಆಳ್ವ, ಉದ್ಯಮಿ ಶ್ರೀಪತಿಭಟ್, ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಪ್ರವೀಣ್  ಶೆಟ್ಟಿ, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ರಾಹೀಮಾನ್,  ಮುಖ್ಯಾಧಿಕಾರಿ ಇಂದು ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ತೋಡಾರು ದಿವಾಕರ ಶೆಟ್ಟಿ, ವಕೀಲ ಶಾಂತಿ ಪ್ರಸಾದ್ ಹೆಗ್ಡೆ, ಸಂಪತ್ ಸಾಮ್ರಾಜ್ಯ , ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ಸಿದ್ದೀಕ್ ಧಾರಿಮಿ, ಎ.ಸಿ.ಎಫ್ ಸತೀಶ್ ಕೆ,  ಆಂಡ್ರೂö್ಯ ಡಿ'ಸೋಜ ಪಾಲಡ್ಕ ಮೊದಲಾದವರಿದ್ದರು.

ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

Post a Comment

1 Comments

  1. ನಾನು ಅದೇ ದಾರಿಯಲ್ಲಿ ಓಡಾಡುವ ಸಾಮಾನ್ಯ ಪ್ರಜೆ. ಸಾಮಾನ್ಯ ಪತ್ರಕರ್ತ. ನನಗೆ ಈ ಸಭೆಯ ಬಗ್ಗೆ ಯಾರೂ ಯಾವುದೇ ಸ್ವರೂಪದಲ್ಲೂ ಮಾಹಿತಿ ನೀಡಿದಹಾಗಿಲ್ಲ ವಲ್ಲ!

    ReplyDelete