ಮೂಡುಬಿದಿರೆ: ದ.ಕ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು, ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ "ಅಥ್ಲೆಟಿಕ್ಸ್ ಕ್ರೀಡಾಕೂಟ - 2022" ವು ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಬುಧವಾರ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಗೆ ದೇಶದಲ್ಲಿ ಉಜ್ವಲವಾದ ಭವಿಷ್ಯವಿದೆ. ಶಿಕ್ಷಣದ ಜತೆಗೆ ಪ್ರತಿಭೆಯನ್ನು ಹೊರ ತರುವಂತಹ ಪ್ರಯತ್ನ ಕ್ರೀಡೆಗಳಿಂದಾಗುತ್ತದೆ. ಸ್ಪರ್ಧೆ ಎಂದರೆ ಬಹುಮಾನ ಮಾತ್ರ ಪಡೆದುಕೊಳ್ಳುವುದಲ್ಲ ಅದು ಗೆಲುವನ್ನು ಸಾಧಿಸುವ ಒಂದು ಮೆಟ್ಟಿಲು.ಪ್ರತಿಯೊಂದು ಹಂತದ ಸ್ಪರ್ಧೆಯಲ್ಲೂ ನಾವು ಭಾಗವಹಿಸಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ವರೆಗೆ ತಲುಪಿ ಸಾಧನೆ ಮಾಡುವ ಛಲವನ್ನು ಹೊಂದಬೇಕು.
ಸರಕಾರಗಳು ಕ್ರೀಡೆಗೆ ವಿಶೇಷವಾಗಿ ಪ್ರೋತ್ಸಾಹ ನೀಡುವ ಮೂಲಕ ಪೂರಕ ವ್ಯವಸ್ಥೆಯನ್ನು ಕಲ್ಪಿಸಿದೆ. ಆದ್ದರಿಂದ ಸೋತಾಗ ನಿರಾಶರಾಗಬೇಡಿ ಬೆಳೆಯಲು ಅವಕಾಶವೆಂದು ತಿಳಿದು ಆತ್ಮಸ್ಥೈರ್ಯದೊಂದಿಗೆ ಭಾಗವಹಿಸಿ ಇದು ನಿಮಗೆ ಜೀವನದಲ್ಲಿ ಸಹಕಾರಿಯಾಗಲಿದೆ ಎಂದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಧ್ವಜರೋಹಣಗೈದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪ.ಪೂ. ಶಿಕ್ಷಣ ಶಿಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ, ಪ.ಪೂ.ದೈ.ಶಿ.ಶಿ.ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಮೊಗ್ರೋಡಿ, ದ.ಕ.ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಗಂಗಾಧರ ಆಳ್ವ, ಅರುಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಳ್ವಾಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸದಾಕತ್ ಸ್ವಾಗತಿಸಿದರು. ರಾಷ್ಟ್ರಮಟ್ಟದ ಕ್ರೀಡಾಪಟು ಮೌಲ್ಯ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಅಂಬರೀಷ್ ಕಾರ್ಯಕ್ರಮ ನಿರೂಪಿಸಿದರು.
0 Comments