ಮೂಡುಬಿದಿರೆ ಪುರಸಭಾಧಿವೇಶನ ಹಸಿಕಸ ವಿಲೇವಾರಿಯಲ್ಲಿ ಅಡಚಣೆ : ಅಡಳಿತ ಪಕ್ಷದ ಸದಸ್ಯೆಯಿಂದ ತರಾಟೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದರೆ : ವಸತಿ ಸಮುಚ್ಛಯಗಳಲ್ಲಿನ ಹಸಿಕಸವನ್ನು ಹಂದಿ ಸಾಕಾಣಿಕೆಗಾರರಿಗೆ ರವಾನಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಎರಡು ಮೂರು ಬಾರಿ ಅಡಚಣೆಯಾಗಿದ್ದು ಇದರಿಂದಾಗಿ ತ್ಯಾಜ್ಯ ದಲ್ಲಿ ಹುಳುಗಳಾಗಿರುವದರಿಂದ ತ್ಯಾಜ್ಯ ಸಂಗ್ರಹವಾಗಿಲ್ಲ, ವಿಲೇವಾರಿ ಮಾಡುವವರಿಗೆ ತಿಳಿಸಿದರೆ ಅವರು ಪುರಸಭೆಯ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳುತ್ತಾರೆ. ಹಾಗಾದರೆ ಪುರಸಭೆಯ ಸದಸ್ಯರಾಗಿರುವ ನಮಗೆ ಗೌರವವಿಲ್ಲವೇ? ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ೨೩ಕೋಟಿಯಷ್ಟು ಹಣವನ್ನು ನಾನು ಸುಪ್ರಿಂ ಕೋರ್ಟಿಗೆ ಕಟ್ಟಬೇಕಾಗುತ್ತದೆ. ವಸತಿ ಸಮುಚ್ಛಯಗಳಲ್ಲಿರುವವರೇ ಇದಕ್ಕೆ ಜವಾಬ್ದಾರರು ಅಲ್ಲದೆ ಅಲ್ಲಿನ ತ್ಯಾಜ್ಯ ವಿಲೇವಾರಿ ಮಾಡಲು ಬೇರೆಯವರಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಈಗಾದರೆ ಇದಕ್ಕೆ ಹೊಣೆ ಯಾರು? ಎಂದು ಸದಸ್ಯೆ ಸ್ವಾತಿ ಪ್ರಭು ಬುಧವಾರ ಪುರಸಭಾಧ್ಯಕ್ಷ ಪ್ರಸಾದ್‌ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿ ಪರಿಸರ ಅಭಿಯಂತರೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಒಂದು ವೇಳೆ ಹಂದಿ ಸಾಕಾಣಿಕೆಗಾರರು. ಯಾವುದೋ ಸಮಸ್ಯೆಯಿಂದ ೧೦ ದಿನಗಳ ಕಾಲ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ ಬೇರೇನು ಮಾಡುವುದೆಂದು ಆಡಳಿತ ಪಕ್ಷದ ಸದಸ್ಯ ರಾಜೇಶ್ ನಾಯ್ಕ ಸಂಶಯ ವ್ಯಕ್ತ ಪಡಿಸಿದರು. ತ್ಯಾಜ್ಯ ವಿಲೇವಾರಿಗೆ ವರ್ಷಕ್ಕೆ ಸುಮಾರು ೧,೬೦ ಕೋಟಿ ರೂಪಾಯಿಯಷ್ಟು ಪುರಸಭೆ ವ್ಯಯಿಸುತ್ತದೆ. ಹೀಗಾಗಿ ಸದಸ್ಯರೆಲ್ಲರೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಮನವಿ ಮಾಡಿದ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆಯನ್ನು ನೀಡಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯತಿಯಲ್ಲಿ ಘನತ್ಯಾಜ್ಯದಿಂದ ಗರಿಷ್ಠ ಆದಾಯ ಗಳಿಸುತ್ತಿರುವಾಗ ಪುರಸಭೆ ವ್ಯಾಪ್ತಿಯ ರಾಜ್ಯ ಘಟಕದಿಂದ ಆದಾಯ ಬಾರದಿರಲು ಕಾರಣವೇನು ಎಂದು ಸದಸ್ಯ ದಿನೇಶ್ ಪೂಜಾರಿ ಪ್ರಶ್ನಿಸಿದರು. ಕರಿಂಜೆಯಲ್ಲಿರುವ ರಾಜ್ಯ ಘಟಕದಿಂದ ಆದಾಯ ವೃದ್ಧಿಗೆ ಅಧಿಕಾರಿಗಳು ಗಮನಹರಿಸಬೇಕು. ನಿರ್ವಹಣೆಯ ಲೆಕ್ಕಾಚಾರಗಳು ಸಮರ್ಪಕವಾಗಿರಬೇಕು. ಮುಂದಿನ ಆರು ತಿಂಗಳೊಳಗೆ ಈ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಆಡಳಿತ, ವಿಪಕ್ಷ ಸದಸ್ಯರು ಆಗ್ರಹಿಸಿದರು. ಅವ್ಯವಹಾರ ಅನುಮಾನಗಳು ಮೂಡುತ್ತಿದೆ. ಎಂದು ಸದಸ್ಯ ಸುರೇಶ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಆರು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸುವಂತೆ ಸದಸ್ಯ ಪಿ.ಕೆ ಥೋಮಸ್ ಪರಿಸರ ಇಂಜಿನಿಯರ್‌ಗೆ ಸೂಚಿಸಿದರು.

ಬೆಂಗಳೂರಿನ ಅಶೋಕ್ ಕುಲಾಲ್‌ ಅವರು ಮಾರ್ಪಾಡಿ ಗ್ರಾಮದ ಆಲಂಗಾರಿನಲ್ಲಿ ಸೆರೆಯಲುದ್ದೇಶಿಸಿರುವ ಎಮ್ಮೆ ಮಾಂಸ ಮಾರಾಟ ಮಳಿಗೆಯ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆಯಾಗಿ ಆ ಪ್ರದೇಶ ಜನವಸತಿ ಪ್ರದೇಶವಾಗಿರುವುದರಿಂದ ಸಾರ್ವಜನಿಕರು ಆಕ್ಷೇಪ ಸಲ್ಲಿ ಸಿದ್ದರಿಂದ ಸರ್ಮಾನುಮತದಿಂದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದೇ ಅವರು ಮತ್ತೆ ಜಾಗವನ್ನು ತೋರಿಸಿ ಪರವಾನಿಗೆಗೆ ಬೇರೊಂದು ಅರ್ಜಿಯನ್ನು ಕೋರಿದ್ದಾರೆ. ಆದರೆ ಇಂದಿನ ಅಜೆಂಡಾದಲ್ಲಿ ಯಾಕೆ ಇಟ್ಟಿಲ್ಲ? ಕೇಂದ್ರ ರಾಜ್ಯ ಸರಕಾರ ಅನುಮತಿ ನೀಡಿದರೂ ಇಲ್ಲೇಕೆ ನೀಡುತ್ತಿಲ್ಲವೆಂದು ಸದಸ್ಯರಾದ ಕೊರಗಪ್ಪ, ಸುರೇಶ್‌ ಪ್ರಭು ಪ್ರಶ್ನಿಸಿದರು. ಸ್ಥಳ ತನಿಖೆ ನಡೆಸಿ ಮುಂದಿನ ಸಭೆಯಲ್ಲಿ ಚರ್ಚಿಸೋಣವೆಂದು ಅಧ್ಯಕ್ಷ ಪ್ರಸಾದ್‌ ಕುಮಾರ್‌ ಉತ್ತರಿಸಿದರು.

ಜಾತಿ ಮತ್ತು ಪಂಗಡದ ಮೀಸಲು ಅನುದಾನದಡಿ  ನಡೆಯುವ ಕಾಮಗಾರಿಗೆ  ಕರೆದ ಗುತ್ತಿಗೆದಾರ ಪೈಕಿ ಗುತ್ತಿಗೆದಾರರೊಬ್ಬರ ಟೆಂಡರ್ ನ್ನು ತಾಂತ್ರಿಕ ಕಾರಣಗಳಿಂದ ಪುರಸಭೆ ಅನರ್ಹಗೊಳಿಸಿರುವುದನ್ನು ಸದಸ್ಯ ಕೊರಗಪ್ಪ ಆಕ್ಷೇಪಿಸಿ ಮರುಟೆಂಡರ್ ಗೆ ಆಗ್ರಹಿಸಿದರು.

 ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅನರ್ಹ   ಗುತ್ತಿಗೆದಾರರ ಮೇಲೆ ಅಷ್ಟೊಂದು ಪ್ರೀತಿ ಇರುವ ಮರ್ಮವೇನು ಎಂದು ಪ್ರಶ್ನಿಸಿದರು. ಅಭಿವೃದ್ಧಿಯನ್ನು ಬಯಸುವ ನೀವು ನಿರ್ಣಯಗಳಿಗೆ ಅಡ್ಡಿ ಉಂಟು ಮಾಡುವ ಮೂಲಕ ಅಭಿವೃದ್ಧಿಗೆ ತೊಡಕು ಮಾಡುತ್ತಿದ್ದಿರಿ ಎಂದು ಆಡಳಿತ ಪಕ್ಷ ಸದಸ್ಯರು ಪ್ರತಿಕ್ರಿಯಿಸಿದರು.

ಜನರು ಕಸಗಳನ್ನು ಅಲ್ಲಲ್ಲಿ ಎಸೆಯುತ್ತಿದ್ದು,ಪುರಸಭೆ ಸಿಸಿ ಕ್ಯಾಮರಗಳನ್ನು ಅಳವಡಿಸಿಯೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಸದಸ್ಯ ಪುರಂದರ ದೇವಾಡಿಗ ಸಭೆಯಲ್ಲಿ ಪ್ರಾಪಿಸಿದರು. ಜ್ಯೋತಿನಗರ ಸ್ಮಶಾನದ ಬಳಿ ಕಸಗಳನ್ನು ರಾಶಿ ಹಾಕುತ್ತಿದ್ದು, ಸಿಸಿ ಕ್ಯಾಮರಗಳಿಂದ ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ಕರೀಂ ಇಕ್ಬಾಲ್‌ ಧ್ವನಿಗೂಡಿಸಿದರು. ಕಸ ಎಸೆಯುವವರಿಗೆ ನಿರಂತರವಾಗಿ ದಂಡ ವಿಧಿಸಿದಲ್ಲಿ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಸದಸ್ಯ ಗಿರೀಶ್‌ ಸಲಹೆ ನೀಡಿದರು. ಉತ್ತಮ ದರ್ಜೆಯ ಸಿಸಿ ಕ್ಯಾಮರಗಳನ್ನು, ಆಳವಡಿಸಿ ನಿಯಂತ್ರಣಕ್ಕೆ ತರುವುದಕ್ಕೆ ಮುಖ್ಯಾಧಿಕಾರಿಗೆ ಅಧ್ಯಕ್ಷರು ಸೂಚಿಸಿದರು. ರುದ್ರಭೂಮಿಗಳಲ್ಲಿ ಶವ ದಫನದ ನಿರ್ವಹಣೆಯ ಬಗ್ಗೆ ಕಮಿಟಿ ರಚಿಸುವ ಬಗ್ಗೆ ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಿಸಿದರು. ಸದಸ್ಯ ಸುರೇಶ್‌ ಪ್ರಭು ಮಾತನಾಡಿ, ಜ್ಯೋತಿನಗರ, ಸ್ಮಶಾನವನ್ನು ನಿರ್ವಾಕರು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಕಮಿಟಿ ರಚಿಸುವುದಾದರೆ ಹೊರಗಿನ ವ್ಯಕ್ತಿಗಳನ್ನು ಸೇರಿಸದೇ ವಾರ್ಡ್ ಸದಸ್ಯರು ಮತ್ತು ಪುರಸಭೆಗೆ ಸಂಬಂಧಿಸಿದವರನ್ನೇ ಸೇರಿಸಿ ಸ್ಮಶಾನಗಳ ನಿರ್ವಹಣೆ ಮಾಡುವಂತೆ ಸಲಹೆಯಿತ್ತರು. ಈ ಬಗ್ಗೆ ಚರ್ಚಿಸಲಾಗಿ ಪ್ರತಿ ಸ್ಮಶಾನಗಳಲ್ಲಿಯೂ ನೋಂದಣಿ ಪುಸ್ತಕಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ನಿರ್ಣಯಿಸಲಾಯಿತು.

 ಪರಿಶಿಷ್ಟ ತಮ್ಮ ವಾರ್ಡ್‌ನಲ್ಲಿ ದೂರನ ಉದ್ಯಾನವನ ನಿರ್ಮಿಸುವಂತೆ ಸದಸ್ಯ, ದಿವ್ಯ ಜಗದೀಶ್ ಸಭೆಯಲ್ಲಿ ಕೋರಿಕೊಂಡರು. ಈಗ ಇರುವ ಉದ್ಯಾನವನಗಳ ನಿರ್ವಹಣೆಯೇ ಸಮರ್ಪಕವಾಗಿ ನಡೆಯುತ್ತಿಲ್ಲ. ಹೊಸ ಉದ್ಯಾನವನಗಳ ನಿರ್ಮಾಣಕ್ಕೆ ಮುಂದೆ `ಚಿಂತನೆ ನಡೆಸಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು. ವಿಶಾಲನಗರ ಉದ್ಯಾನವನ ಹೊರತುಪಡಿಸಿ  ಇತರ ಎಲ್ಲ ಉದ್ಯಾನವನಗಳ ನಿರ್ವಹಣೆಗೆ ಟೆಂಡರ್ ಕರೆದು ನಿರ್ವಹಿಸುವ ಬಗ್ಗೆ ಚರ್ಚೆ ನಡೆಯಿತು.

ಉಪಾಧ್ಯಕ್ಷೆ ಸುಜಾತ, ಮುಖ್ಯಾಧಿಕಾರಿ ಇಂದು ಎಂ, ಪುರಸಭೆ ಇಂಜಿನಿಯರ್ ಪದ್ಮನಾಭ ಎಂ, ಪರಿಸರ ಅಭಿಯಂತರೆ ಶಿಲ್ಪಾ ಎಸ್‌, ಪ್ರಥಮ ದರ್ಜೆ ಸಹಾಯಕಿ, ಮೀನಾಕ್ಷಿ ಉಪಸ್ಥಿತರಿದ್ದರು.

Post a Comment

0 Comments