ಎಕ್ಸಲೆಂಟ್ ದಶಮ ಸಂಭ್ರಮ ಕನ್ನಡ ಹಬ್ಬ ಮತ್ತು ಸಾಂಸ್ಕೃತಿಕ ವೈಭವಕ್ಕೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ದಶಮ ಸಂಭ್ರಮದ ಅಂಗವಾಗಿ ನಡೆಯುವ ನುಡಿಹಬ್ಬವನ್ನು  ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ. ಅವರು ಹಿಂಗಾರವನ್ನು ಅರಳಿಸುವ ಮೂಲಕ ಚಾಲನೆಯನ್ನು ನೀಡಿದರು.

 ನಂತರ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಸಾಹಿತ್ಯದ ರಥವನ್ನು ಮುನ್ನಡೆಸಬೇಕಾದವರು ವಿದ್ಯಾರ್ಥಿಗಳು.  ಸಾಹಿತ್ಯ ಕ್ಷೇತ್ರದ ಕಡೆಗೆ ವಿದ್ಯಾರ್ಥಿಗಳು ಬಂದರೆ ಉತ್ತಮ. ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಯುವ ಸಾಹಿತಿಗಳಿದ್ದಾರೆ ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕಾಗಿದೆ. ಅದಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ 250 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಅದರಲ್ಲಿ 230 ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿಯೇ ನಡೆಸಲಾಗಿದೆ.

 ಸಾಹಿತ್ಯ ಕ್ಷೇತ್ರವನ್ನು ವೃತ್ತಿಯನ್ನಾಗಿಸಿಕೊಂಡವರಿದ್ದಾರೆ. ಸ್ವ ಪ್ರಯತ್ನದಿಂದ ಮೇಲಕ್ಕೆ ಬಂದವರಿದ್ದಾರೆ ಅಲ್ಲದೆ ವರ್ಷಕ್ಕೆ 200ಕ್ಕಿಂತಲೂ ಅಧಿಕ ಸಾಹಿತ್ಯ ಪುಸ್ತಕಗಳು ಬಿಡುಗಡೆಯಾಗುತ್ತಿವೆ ಮತ್ತು ಬರೆಯುವವರ ಮತ್ತು  ಕೊಂಡು ಓದುವವರ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಇಂದು ಸಾಹಿತ್ಯದ ಕಡೆಯ ಒಲವು ಕಡಿಮೆಯಾಗಿಲ್ಲವೆಂಬುದನ್ನು ತೋರಿಸಿಕೊಡುತ್ತಿದೆ ಎಂದು ಹೇಳಿದರು. 

 ಮಾಜಿ ಸಚಿವ, ಸಂಸ್ಥೆಯ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮಲ್ಲಿ ಕನ್ನಡದ ಬಗ್ಗೆ ದುರಾಭಿಮಾನ ಇರದೆ ಅಭಿಮಾನವಿರಬೇಕು. ಇಲ್ಲಿ ಶಿಕ್ಷಣ ಪಡೆದು ಹೊರದೇಶಗಳಲ್ಲಿ ಉದ್ಯೋಗವನ್ನು ಮಾಡುತ್ತಿದ್ದರು ದೇಶ ಮತ್ತು ತಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಮರೆಯಬಾರದೆಂದ ಅವರು ವಿದ್ಯಾರ್ಥಿಗಳು ಒಳ್ಳೆಯ ಹೃದಯವನ್ನು ಕಟ್ಟಿಕೊಳ್ಳಬೇಕು ಆಗ ಮಾತ್ರ  ದೇಶಪ್ರೇಮ ಬೆಳೆಯಲು ಸಾಧ್ಯ ಎಂದರು.

ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ಕನ್ನಡ ಅಭಿಮಾನ ಇರುವುದರಿಂದಲೇ ಕಾದಂಬರಿಗಳು ಹೊರ ಬರುತ್ತಿವೆ .ತಮ್ಮ ಸಂಸ್ಥೆಯ ವಿದ್ಯಾರ್ಥಿಯೂ ಈ ಬಾರಿ ಕಾದಂಬರಿಯೊಂದನ್ನು ಬರೆದಿದ್ದು ಬಿಡುಗಡೆಗೊಳ್ಳಲಿದೆ.ನಮ್ಮಲ್ಲಿ ಒಳ್ಳೆಯತನವನ್ನು ಬೆಳೆಸಿಕೊಳ್ಳೋಣ ಹಬ್ಬದೊಂದಿಗೆ ಮುಂದುವರೆಯೋಣವೆಂದು ಶುಭ ಹಾರೈಸಿದರು.

ಉದ್ಯಮಿ ಶ್ರೀಪತಿ ಭಟ್, ಎಪಿಎಂಸಿಯ  ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.ಮುಖ್ಯ ಶಿಕ್ಷಕ ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು

   ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.

Post a Comment

0 Comments