ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ದಶಮ ಸಂಭ್ರಮದ ವಿವಿಧ ಕಾರ್ಯಕ್ರಮಗಳು ಡಿ.9ರಿಂದ 11ವರೆಗೆ ನಡೆಯಲಿದೆ. ಡಿ.9ರಂದು ಕನ್ನಡ ಹಬ್ಬ ಮತ್ತು ಸಾಂಸ್ಕೃತಿಕ ವೈಭವ, ಡಿ.10ರಂದು ನಗೆಹಬ್ಬ ಮತ್ತು ಯಕ್ಷವೈಭವ ಹಾಗೂ ಡಿ.11ರಂದು ಎಕ್ಸಲೆಂಟ್ ಉತ್ಸವ ಮತ್ತು ಸಂಗೀತ ರಸಸಂಜೆಯನ್ನು ಆಯೋಜಿಸಲಾಗಿದೆ ಎಂದು ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.9ರಂದು ಬೆಳಿಗ್ಗೆ 9.30ಕ್ಕೆ ಕನ್ನಡಹಬ್ಬವನ್ನು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಉದ್ಘಾಟಿಸಲಿರುವರು. ಮಾಜಿ ಸಚಿವ, ಎಕ್ಸಲೆಂಟ್ ಸಂಸ್ಥೆಯ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ, ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮುಖ್ಯ ಅತಿಥಿಗಳಾಗಿರುವರು. ಸಾಯಂಕಾಲ 4 ಗಂಟೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ ನಾಗೇಶ್, ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿರುವರು. ಸಾಯಂಕಾಲ 6 ಗಂಟೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸಚಿವ ವಿ.ಸುನೀಲ್ ಕುಮಾರ್, ವಕೀಲ ಬಾಹುಬಲಿ ಪ್ರಸಾದ್ ಮುಖ್ಯ ಅತಿಥಿಗಳಾಗಿರುವರು.
ಡಿ.10ರಂದು ಬೆಳಗ್ಗೆ 9.30ರಿಂದ ನಗೆಹಬ್ಬ ಮತ್ತು ಯಕ್ಷವೈಭವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಶಾಸಕ ಡಿ.ವೇದವ್ಯಾಸ ಕಾಮತ್ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ ಟ್ರಸ್ಟಿ ಶರಣ ಕುಮಾರ್, ಧಾರ್ಮಿಕ ದತ್ತಿ ಇಲಾಖೆ ದೇವೇಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿರುವರು. ಬೆಳಗ್ಗೆ 11ಗಂಟೆಗೆ ಗಂಗಾವತಿ ಪ್ರಾಣೇಶ್ ಬಳಗದಿಂದ ನಗೆಹಬ್ಬ, ಸಾಯಂಕಾಲ 6 ಗಂಟೆಯಿಂದ ಕಟೀಲು ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ.11ರಿಂದ ಎಕ್ಸಲೆಂಟ್ ಉತ್ಸವ ನಡೆಯಲಿದ್ದು, ಬೆಳಗ್ಗೆ 10.30ರಿಂದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿರುವರು. ಮಧ್ಯಾಹ್ನ 2.30ರಿಂದ ಪೋಷಕರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎ ಜಯಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಸಾಯಂಕಾಲ 5.30ರಿಂದ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ಅದಾನಿ ಗ್ರೂಪ್ನ ಕಾರ್ಯನಿರ್ವಹಣ ನಿರ್ದೇಶಕ ಕಿಶೋರ್ ಆಳ್ವ, ಎಂಎಲ್ಸಿ ಮಂಜುನಾಥ ಭಂಡಾರಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ. ಮುಖ್ಯ ಅತಿಥಿಗಳಾಗಿರುವರು. ರಾತ್ರಿ 7ಗಂಟೆಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ವಿಲಾಸ್ ನಾಯಕ್ ಅವರಿಂದ ಚಿತ್ರ ವೈವಿಧ್ಯ ಹಾಗೂ ರಾತ್ರಿ 8.30ರಿಂದ ಹಿನ್ನೆಲೆ ಗಾಯಕ ಸಂಜಿತ್ ಹೆಗ್ಡೆ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಯುವರಾಜ್ ಜೈನ್ ಮಾಹಿತಿ ನೀಡಿದರು.
ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments