ಮಂಗಳೂರಿನಿಂದ ಮೂಡುಬಿದಿರೆ ಬೆಳುವಾಯಿಯ ಸಾಣೂರುವರೆಗಿನ ಚತುಷ್ಪಥ ರಸ್ತೆಗೆ ಅಂತಿಮ ಮುದ್ರೆ ದೊರೆತಿದೆ. ಅಕ್ಟೋಬರ್ 10 ರಿಂದ ದಿನಾಂಕ ಆರಂಭವಾಗಿದ್ದು ಮುಂದಿನ ಎರಡು ವರ್ಷಗಳ ಒಳಗಾಗಿ ಈ ರಸ್ತೆಯನ್ನು ಲೋಕಾರ್ಪಣೆಗೊಳಿಸುವ ಬಗ್ಗೆ ಗಡುವು ನೀಡಲಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ಭೂಸ್ವಾಧೀನ ವೆಚ್ಚ ಹೊರತುಪಡಿಸಿ ಸುಮಾರು ರೂ. 1137 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಂಗಳೂರಿನ ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ NH 169 ಕಾಮಗಾರಿ ಪ್ರಾರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾಣೂರು ಬಿಕರ್ನಕಟ್ಟೆ ಹೈವೇಸ್ ಲಿಮಿಟೆಡ್ ಸಂಸ್ಥೆಗೆ ದಿನಾಂಕ 10ನೇ ಅಕ್ಟೋಬರ್ 2022 ನ್ನು ನೇಮಕಾತಿ ದಿನಾಂಕ ಎಂದು ನಿಗದಿ ಪಡಿಸಿ ಕಾರ್ಯಾದೇಶ ನೀಡಿದೆ. 

ಸದರಿ ಕಂಪೆನಿಯು ರಸ್ತೆ ಕಾಮಗಾರಿಯನ್ನು NHAI ನಿಗದಿ ಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕಾಗಿದೆ ಎಂದು ಸಂಸದರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನೇಕ ವರ್ಷಗಳ ಬೇಡಿಕೆಯಾಗಿರುವ ಈ ರಸ್ತೆಯು ಹಲವಾರು ಭೂಮಾಲೀಕರ ಅಸಮ್ಮತಿಯಿಂದ ಸ್ಥಗಿತಗೊಂಡಿತ್ತು. ಸಂಸದರ ನಿರಂತರ ಸಂಧಾನ ಹಾಗೂ ಕೇಂದ್ರ ಸರ್ಕಾರ ನೀಡಿದ ಪರಿಹಾರದಿಂದ ಬಹುತೇಕ ಭೂಮಾಲೀಕರು ಜಮೀನು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಂಸದರು ಸೂಚನೆ ನೀಡಿದ್ದಾರೆ.