ಮೂಡುಬಿದಿರೆ: ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಹಾಗೂ ಪುರಸಭೆ ಮೂಡುಬಿದಿರೆ ಇದರ ಸಹಯೋಗದಲ್ಲಿ ಸ್ಫೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ಜನನ/ಮರಣ ಪ್ರಮಾಣ ಪತ್ರಗಳನ್ನು ತಲುಪಿಸುವ ಸೇವೆಯ ಒಡಂಬಡಿಕೆಗೆ ಮೂಡುಬಿದಿರೆ ಪುರಸಭಾ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ. ಏಂಜೆಲ್ ರಾಜ್ ಮಾತನಾಡಿ, ಜನನ ಮತ್ತು ಮರಣ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸುವ ನೂತನ ಸೇವೆಯಿಂದ ಸಾರ್ವಜನಿಕರಿಗೆ ಆಗುವ ಅನುಕೂಲಗಳ ಬಗ್ಗೆ ಹಾಗೂ ಜನತೆಗೆ ಈ ಸೇವೆಯನ್ನು ತಲುಪಿಸುವಲ್ಲಿ ಮೂಡುಬಿದಿರೆ ಪುರಸಭೆಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಇಂದು.ಎಂ ಮಾತನಾಡಿ ಈ ಒಡಂಬಡಿಕೆಗೆ ಪುರಸಭೆಯ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಧರ್ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರಕ್ಕಾಗಿ ನಗರ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸುವಾಗ, ಪ್ರಮಾಣ ಪತ್ರದ ಅರ್ಜಿಯ ಜೊತೆಗೆ, ಅಂಚೆ ಇಲಾಖೆಯ ಅರ್ಜಿಯನ್ನು ಪೂರ್ಣವಾಗಿ ಭರ್ತಿಮಾಡಿ ಕೊಟ್ಟರೆ, ಅರ್ಜಿದಾರರು ಜನನ/ಮರಣ ಪ್ರಮಾಣ ಪತ್ರವನ್ನು ಪಡೆಯಲು ಮತ್ತೊಂದು ಬಾರಿ ಕಛೇರಿಗಳಿಗೆ ಭೇಟಿನೀಡಬೇಕಾಗಿರುವುದಿಲ್ಲ. ನೇರವಾಗಿ ಅಂಚೆ ಇಲಾಖೆಯೇ ಈ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಂಡು, ಅಂಚೆಯಣ್ಣನ ಮೂಲಕ ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುತ್ತದೆ. ಈ ಸೇವೆ ಪಡೆಯುವ ಅರ್ಜಿದಾರರು ಜನನ/ಮರಣ ಪತ್ರದ ಬಟವಾಡೆ ಸಮಯದಲ್ಲಿ ಕೇವಲ ನೂರು ರೂಪಾಯಿಗಳನ್ನು ಪಾವತಿಮಾಡಿದರೆ ಆಯಿತು.
ಸಾರ್ವಜನಿಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜೋಸೆಫ್ ರೋಡ್ರಿಗಸ್, ಬಂಟ್ವಾಳ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ್ ಎಮ್ , ಮೂಡುಬಿದಿರೆ ಅಂಚೆ ಪಾಲಕಿ ಉಷಾ, ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಕೆ.ಎಸ್. ಮತ್ತು ಮೂಡುಬಿದಿರೆ ಪುರಸಭೆಯ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
0 Comments