ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ ಯೋಜನೆಯ ಮೂಲಕ ಅಗ್ನಿವೀರರಾದವರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಘೋಷಿಸಿದ್ದಾರೆ.
ಉಡುಪಿಯ ತಮ್ಮ ಸಚಿವರ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅಗ್ನಿಪಥಕ್ಕೆ ಅಗ್ನಿ ಕೊಡುವವರು ಗಲಾಟೆ ಆರಂಭಿಸಿದ್ದು, ದೇಶದಲ್ಲಿ ಅಗ್ನಿವೀರರು ಕೂಡ ಸೃಷ್ಟಿಯಾಗುತ್ತಿದ್ದಾರೆ. ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷಗಳ ತರಬೇತಿ ನೀಡಲಾಗುತ್ತಿದ್ದು, ಅಗ್ನಿ ವೀರರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೀಸಲಾತಿ ನೀಡುವ ಮೂಲಕ ದೈಹಿಕ ಶಿಕ್ಷಕ ಹುದ್ದೆ ನೀಡಲು ಚಿಂತನೆ ಮಾಡಲಾಗಿದ್ದು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರಕ್ಕೆ ಟಿಪ್ಪಣಿ ಕೊಟ್ಟಿದ್ದೇನೆ ಎಂದರು.
ಶೇಕಡಾ 75 ರಷ್ಟು ಅಗ್ನಿ ವೀರರಿಗೆ ಇಲಾಖೆಯಲ್ಲಿ ಹುದ್ದೆಗಳನ್ನು ಮೀಸಲಿಡುವ ಯೋಜನೆ ಇದ್ದು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಮೀಸಲಾತಿಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಇತರ ಹುದ್ದೆಗಳಲ್ಲೂ ಆದ್ಯತೆ ನೀಡುವ ಚಿಂತನೆ ಇದ್ದು, ಕಡತವನ್ನು ಮಂಡಿಸಲು ಈಗಾಗಲೇ ಟಿಪ್ಪಣಿ ಕೊಡಲಾಗಿದೆ. ಸುಶಿಕ್ಷಿತ ಅಗ್ನಿ ವೀರರಿಗೆ ಸೂಕ್ತ ಹುದ್ದೆ ನೀಡಲು ಚಿಂತಿಸಲಾಗಿದ್ದು, ವಾರ್ಡನ್ ಹುದ್ದೆಯಲ್ಲೂ ಅಗ್ನಿ ವೀರರಿಗೆ ಅವಕಾಶ ನೀಡಲು ಯೋಜಿಸಲಾಗಿದೆ. ಅಗ್ನಿ ವೀರರನ್ನು ನೇಮಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದರು.
ಅಗ್ನಿಪಥ್ ಯೋಜನೆಗೆ ಪೂರಕವಾಗಿ ಸೇನಾ ಸೇರ್ಪಡೆಗೆ ಪೂರ್ವ ತರಬೇತಿ ಕೇಂದ್ರಗಳ ಸ್ಥಾಪನೆಗೆ ಚಿಂತಿಸಲಾಗಿದ್ದು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗುವುದು. ರಾಣಿ ಅಬ್ಬಕ್ಕ, ಕೋಟಿ ಚೆನ್ನಯ್ಯ, ಹೆಂಜ ನಾಯ್ಕರ ಹೆಸರಿನಲ್ಲಿ ಕೇಂದ್ರ ಸ್ಥಾಪನೆಯಾಗಲಿದ್ದು, ಈ ಕೇಂದ್ರಗಳ ಸ್ಥಾಪನೆಗೆ ಈಗಾಗಲೇ ಆದೇಶ ಮಾಡಲಾಗಿದೆ ಮತ್ತು ತಿಂಗಳೊಳಗೆ ಕೇಂದ್ರದ ಚಟುವಟಿಕೆಗಳ ಪ್ರಾರಂಭವಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
0 Comments