ಮೂಡುಬಿದಿರೆ: ಹಿಂದಿನ ಕಾಲದಲ್ಲಿ ರಾಜಕಾಲುವೆಗಳಿಂದ ತಗ್ಗು ಪ್ರದೇಶದಲ್ಲಿ ಗದ್ದೆಗಳಲ್ಲಿ ಭತ್ತ ಬೇಸಾಯಗಳಿಂದ ಈ ಕಾಲುವೆಗಳಿಂದ ನೀರನ್ನು ಬಳಸಲಾಗುತ್ತಿತ್ತು. ಇದರಿಂದ ಗದ್ದೆಗೆ ಬೇಕಾಗಿರುವಷ್ಟು ನೀರನ್ನು ಹಾಯಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಆ ಕಾಲ ಬದಲಾಗಿದೆ.
ಗುಡ್ಡಗಳೆಲ್ಲವನ್ನು ಜರಿದು ಸಮತಟ್ಟಾಗಿಸಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಗುಡ್ಡಗಳ ನೀರಿನೊಂದಿಗೆ ಪೇಟೆಯ ಕೊಳಚೆ ಹರಿದು ಕಾಲುವೆಗಳಿಗೆ ಸೇರಿ ಸಮತಟ್ಟಾಗಿ ಅಭಿವೃದ್ಧಿ ನಡೆಯುತ್ತಿರುವ ಪರಿಣಾಮ ಅಲ್ಲಿಂದ ಹರಿದು ಬಂದ ಮಣ್ಣು ಈ ರಾಜಕಾಲುವೆಗಳನ್ನು ಸೇರಿದೆ. ಮೂಡುಬಿದಿರೆ ಪರಿಸರದ ಕೆಲವೊಂದು ಕಾಲುವೆಗಳನ್ನು ಪರಿಶೀಲಿಸಿದರೆ ಅದರಲ್ಲಿ ನೀರು ಅರಿಯುವುದೋ ಅಥವಾ ಪಟ್ಟಣಗಳ ಕೊಳಚೆ ನೀರು ಹರಿಯುವುದೋ ಅನ್ನೋ ಸಂಶಯ ಮೂಡುವುದು ಪಕ್ಕಾ. ಇಲ್ಲಿಯ ರಾಜಕಾಲುವೆಗಳು ಯಾವ ಸರಕಾರಿ ಸ್ವತ್ತೂ ಅಲ್ಲ, ಇವುಗಳು ಖಾಸಗಿ ಭೂಮಿಯಲ್ಲಿವೆ.
ಮೂಡುಬಿದಿರೆ ಪರಿಸರದ ಕಲ್ಸಂಕ, ಜೈನ ಪೇಟೆ ದಾಟಿದ ಬಳಿಕ ಸಿಗುವ ಬಡಗು ಬಸದಿ ಬಳಿಯ ಕಾಲುವೆ, ನಾಗರಕಟ್ಟೆಯ ದಕ್ಷಿಣ ಭಾಗದ ಕಾಲುವೆ, ಸ್ವರಾಜ್ಯ ಮೈದಾನದ ಬಳಿ ಇರುವ ಕರ್ಲುಗುಂಡಿ-ಕಲ್ಸಂಕ-ಸಮಗಾರಗುಂಡಿ ಕಾಲುವೆಗಳಿಂದ ಪರಿಸರ ಕೊಳಚೆ ನೀರಿನಿಂದ ಆವೃತವಾಗಿದೆ.
ಬಡಗು ಬಸದಿಯ ಕಾಲುವೆಗಳು ವಸತಿ ಸಮುಚ್ಚಯಗಳಿಂದ ಅಲ್ಲಿಯ ಕೊಳಚೆ ನೀರು ಹರಿಯುತ್ತಿರುತ್ತವೆ. ಮುಳ್ಳು ಗಿಡಗಳಿಂದ ಹೂಳು ತುಂಬಿದ್ದು, ಇದರಿಂದ ಅರಮನೆಬಾಗಿಲು ರಸ್ತೆಯ ಕಿರಿದಾದ ಕಾಲುವೆಯಲ್ಲೂ ಹೂಳು ತುಂಬಿಕೊಂಡಿದೆ. ಕಬ್ಬಿಣ, ಗಾಜು, ಪ್ಲಾಸ್ಟಿಕ್ ಎಲ್ಲವೂ ತ್ಯಾಜ್ಯದೊಂದಿಗೆ ಸೇರಿ ಕಾಲುವೆ ಕಲುಷಿತಗೊಂಡಿದೆ. ಸ್ವರಾಜ್ಯ ಮೈದಾನದ ಬಳಿ ಇರುವ ಕರ್ಲುಗುಂಡಿ -ಕಲ್ಸಂಕ-ಸಮಗಾರಗುಂಡಿ ಕಾಲುವೆಯ ಹೂಳೆತ್ತುವ ಕಾರ್ಯ ಪ್ರಾರಂಭವಾಗಿದ್ದರೂ, ಆ ಹೂಳು ಮತ್ತೆ ಸರಾಗವಾಗಿ ಹರಿಯುತ್ತಲೇ ಇವೆ.
ಇವುಗಳ ಬಗ್ಗೆ ಗಮನ ಹರಿಸದ ಇಲಾಖೆಗಳು ಹೂಳೆತ್ತು ನಾಟಕದಲ್ಲಿ ತೊಡಗಿವೆ. ಒಂದು ವೇಳೆ ಮಳೆ ಬಂದರೆ ಹೂಳು, ತ್ಯಾಜ್ಯಗಳು ನೀರಿನಲ್ಲಿ ಹರಿದು ತೊಂದರೆಯಾಗುವುದಂತೂ ಖಚಿತ.



0 Comments