ಬೆಂಗಳೂರು : ರಾಜ್ಯದಲ್ಲಿ ಮತ್ತೆ ಸಂಪುಟ ರಚನೆಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಕೇಂದ್ರದ ಮತದಾನಕ್ಕೆ ಇನ್ನೇನು ಕೇವಲ ಒಂದು ವರ್ಷವಿರುವ ಸಮಯದಲ್ಲಿ ಈ ಬಾರಿಯಾದರೂ ಸಚಿವ ಸ್ಥಾನಗಿಟ್ಟಿಸಬೇಕು ಹಂಬಲ ಶುರುವಾಗಿದೆ.
ಚುನಾವಣೆಯ ಮತಗಳಿಕೆ ಲೆಕ್ಕಾಚಾರದಲ್ಲಿ ಜಾತಿ ,ಪಂಗಡವನ್ನು ಟಾರ್ಗೆಟ್ ಮಾಡಿ ಸಚಿವ ಸ್ಥಾನ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಹಾಗಾಗಿ ರಾಜ್ಯ ಸಚಿವ ಸಂಪುಟ ಯಾರ ಪಾಲಿಗಿದೆ ಎಂಬ ಚರ್ಚೆ ಹರಿದಾಡುತ್ತಲೇ ಇದೆ.
ಬೊಮ್ಮಾಯಿ ದೆಹಲಿಗೆ ದೌಡಾಯಿಸುತ್ತಿದ್ದಂತೆ ಸಚಿವ ಸಂಪುಟ ಆಕಾಂಕ್ಷಿಗಳಲ್ಲಿ ಸಂಭ್ರಮ ಮನೆಮಾಡಿದ್ದರೇ, ಈಗಾಗಲೇ ಸಚಿವರಾಗಿರುವ ಹಲವರ ಎದೆಯಲ್ಲಿ ನಡುಕ ಆರಂಭವಾಗಿದೆ.
ಮೂಲಗಳ ಮಾಹಿತಿ ಪ್ರಕಾರ ಸದ್ಯ ಸಚಿವ ಸಂಪುಟದಲ್ಲಿರೋ 12 ಕ್ಕೂ ಹೆಚ್ಚು ಸಚಿವರಿಗೆ ಹೈಕಮಾಂಡ್ ಖೋಕ್ ನೀಡಲಿದ್ದು, ಹಲವು ಹೊಸ ಸಚಿವರಿಗೆ ಅವಕಾಶ ನೀಡಲಿದೆ ಎನ್ನಲಾಗುತ್ತಿದೆ. ಹಲವಾರು ಕಾರಣಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರೋ ಈಶ್ವರಪ್ಪ ಅವರಿಗೆ ಸಂಪುಟದಿಂದ ಹೊರಬೀಳೋ ಭಾಗ್ಯ ಬಹುತೇಕ ಖಚಿತವಾಗಿದೆ.
ಇದನ್ನು ಹೊರತು ಪಡಿಸಿದಂತೆ, ಕೆಲಸ ಕಾರ್ಯ ಹಾಗೂ ಪಕ್ಷದ ಬಲವರ್ಧನೆಗೆ ಕೊಡುಗೆ ನೀಡದ ಕಾರಣಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಆನಂದ ಸಿಂಗ್, ಬಾಬುರಾವ್ ಚವ್ಹಾಣ್, ಬಿ.ಸಿ.ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಅಲ್ಲದೇ ಸಚಿವ ಸಂಪುಟದ ಏಕೈಕ ಮಹಿಳಾ ಸಚಿವೆ ಖ್ಯಾತಿಯ ಶಶಿಕಲಾ ಜೊಲ್ಲೆ ಕೂಡ ಸಂಪುಟದಿಂದ ಹೊರಬೀಳಲಿದ್ದಾರಂತೆ. ಈ ಮಧ್ಯೆ ಸಚಿವ ಸ್ಥಾನ ಆಕಾಂಕ್ಷಿತರ ದೊಡ್ಡ ಪಟ್ಟಿಯೇ ಇದ್ದು, ಈ ಪೈಕಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೊದಲ ಸ್ಥಾನದಲ್ಲಿದ್ದಾರೆ.
ರೇಣುಕಾಚಾರ್ಯ ಸೇರಿದಂತೆ ಇನ್ನಿತರ ಶಾಸಕರುಗಳಾದ ಆನಂದ ಮಾಮನಿ, ಹಾಲಪ್ಪ, ರಾಮದಾಸ್ ಮುಂತಾದವರು ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಶಾಸಕಿಯರಾದ ಪೂರ್ಣಿಮಾ ಹಾಗೂ ರೂಪಾಲಿ ನಾಯ್ಕ ಕೂಡ ಸಚಿವ ಸಂಪುಟಕ್ಕೆ ಸೇರಲು ತುದಿಗಾಲಿನಲ್ಲಿ ನಿಂತಿದ್ದು, ತಮ್ಮ ಪರ ಲಾಭಿ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ತಕರಾರು ಜೋರಿದೆ ಅಂತಲೇ ಹೇಳಬಹುದು.
0 Comments