ಉಡುಪಿ: ರಾಜ್ಯದ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ಟಿಪ್ಪು ನೆನಪಿನ ಸಲಾಂ ಆರತಿಗೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಉಡುಪಿಯ ಬೈಂದೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದೇವಸ್ಥಾನಗಳನ್ನು ಕೊಳ್ಳೆ ಹೊಡೆದ, ಹಿಂದೂಗಳ ನರಮೇಧ ನಡೆಸಿದ ವ್ಯಕ್ತಿಯ ಹೆಸರಿನಲ್ಲಿ ಪೂಜೆ ನಡೆಯೋದು ಅಕ್ಷಮ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪುವಿನ ಹೆಸರಿನಲ್ಲಿ ಪೂಜೆ ನಡೆದರೆ ಕೇವಲ ಭಕ್ತರಿಗೆ ಮಾತ್ರವಲ್ಲ ಸ್ವತಃ ದೇವಿಗೇ ನೋವಾಗಬಹುದು. ಯಾರದ್ದೋ ಕಾಲದಲ್ಲಿ ಆದ ತಪ್ಪನ್ನು ಮುಂದುವರಿಸೋದು ಸರಿಯಲ್ಲ. ಆಗ ಆಗಿ ಹೋಗಿದೆ, ಇನ್ನು ಆಗೋದು ಬೇಡ. ಇನ್ನೂ ಹೀಗೇಯೇ ಮುಂದುವರಿದರೆ ನಾಳೆ ಅಲ್ಲಾನಾ ಹೆಸರಿನಲ್ಲೂ ಪೂಜೆ ಬರಬಹುದು. ಸಲಾಂ ಅಲ್ಲಾ ಎಲ್ಲವೂ ಅವರಲ್ಲೇ ಇರಲಿ. ನಮ್ಮ ಕಡೆಗೆ ಬರೋದೇ ಬೇಡ" ಎಂದು ತಿಳಿಸಿದ್ದಾರೆ.
ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ನಿಲ್ಲಿಸಲು ವಿಎಚ್ಪಿ ಆಗ್ರಹ
ಕೊಲ್ಲೂರು: ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ನಿಲ್ಲಿಸಲು ವಿಎಚ್ಪಿ ಆಗ್ರಹ
ದೇವಸ್ಥಾನಗಳಲ್ಲಿ ವ್ಯಾಪಾರ ನಿಷೇಧದ ಬಗ್ಗೆ ಮಾತನಾಡಿದ ಭಟ್, "ಈ ಅಭಿಯಾನ ಹಿಂದೆಯೇ ಆಗ ಬೇಕಿತ್ತು. ಹಿಂದೂ ಜಾಗೃತನಾಗಿದ್ದಾನೆ. 2002ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೆ ಮುಂದಿನ ಅಪಾಯದ ಬಗ್ಗೆ ಮನವರಿಕೆ ಆಗಿ ಧಾರ್ಮಿಕ ದತ್ತಿಯಲ್ಲೇ ಈ ನಿಯಮ ಮಾಡಿದ್ದಾರೆ. ಶುರು ಮಾಡಿದ್ದು ಅವರು ಮುಗಿಸೋದು ನಾವು. ಹಿಂದೂಗಳದ್ದು ಕೇವಲ ಆ್ಯಕ್ಷನ್ಗೆ ರಿಯಾಕ್ಷನ್ ಅಷ್ಟೇ ಎಂದರು.
ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹೊಸ ನಿಯಮ
ಕೊಲ್ಲೂರು ದೇವಳದ ಆಡಳಿತ ಮಂಡಳಿ ಮಾತ್ರ ನಮ್ಮಲ್ಲಿ ಸಲಾಂ ಪೂಜೆ ಅನ್ನುವ ಪೂಜೆಯೇ ಇಲ್ಲ ಅಂತಾ ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವಳದ ಪ್ರಧಾನ ಅರ್ಚಕರಲ್ಲಿ ಒಬ್ಬರಾದ ಕೆ. ವಿ. ಶ್ರೀಧರ ಅಡಿಗ ಎಂಬುವವರು, ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ನಡೆಯುವ ರಾತ್ರಿ ಪೂಜೆಗೆ ಪ್ರಧೋಷ ಪೂಜೆ ಅಂತಾ ಕರೆಯುತ್ತಾರೆ" ಎಂದರು.
"ಈ ಪೂಜೆಗೆ ಬಹಳ ಮಹತ್ವವಿದೆ. ಪ್ರದೋಷ ಕಾಲದಲ್ಲಿ ಎಲ್ಲಾ ದೇವಿ ದೇವತೆಗಳ ಸಾನಿಧ್ಯ ಇರುತ್ತದೆ. ಆಗ ದೇವಿಗೆ ವೈಭವೋಪೇತ ವಾಗಿ ರಾಜೋಪಚಾರ ದೀಪಾರಾಧನೆ ನಡೆಸಲಾಗುತ್ತದೆ. ಇದು ಪ್ರದೋಷ ಕಾಲದ ಮಹತ್ವದ ಪೂಜೆ ಹೊರತು ಸಲಾಂ ಮಂಗಳಾರತಿ ಅಲ್ಲ" ಎಂದು ಸ್ಪಷ್ಟಪಡಿಸಿದರು.
"ಹಿಂದಿನ ಇತಿಹಾಸದ ಪ್ರಕಾರ ಕೊಲ್ಲೂರು ದೇವಳದಲ್ಲಿ ಪ್ರದೋಷ ಕಾಲದ ಪೂಜೆ ನಡೆಯುತ್ತಿದ್ದ ವೇಳೆ ತಾಯಿ ಮೂಕಾಂಬಿಕೆಗೆ ಟಿಪ್ಪು ಬಂದು ಸಲಾಂ ಮಾಡಿದ್ದ. ಹೀಗಾಗಿ ಈ ಪೂಜೆಯನ್ನು ಸಲಾಂ ಮಂಗಳಾರತಿ ಅಂತಾ ಆಡು ಭಾಷೆಯಲ್ಲಿ ವಾಡಿಕೆಗೆ ಕರೆಯಲಾಗುತ್ತದೆ. ಆದರೆ ಇದಕ್ಕೆ ಯಾವುದೇ ದಾಖಲೆಗಳು ಇಲ್ಲ. ಆದರೆ ರಾತ್ರಿ ನಡೆಯುವ ಪ್ರದೋಷ ಪೂಜೆಗೆ ಪ್ರದೋಷ ಮಂಗಳಾರತಿ ಅಂತಾ ದಾಖಲೆಯಿದೆ. ನಾಡಿನ ಯೋಗಕ್ಷೇಮಕ್ಕೆ ಈ ಪೂಜೆಯ ವೇಳೆ ಪ್ರಾರ್ಥನೆ ನಡೆಯುತ್ತದೆ" ಎಂದು ಕೆ.ವಿ ಶ್ರೀಧರ ಅಡಿಗ ತಿಳಿಸಿದರು
0 Comments