ಮೂಡುಬಿದಿರೆ: ಕರ್ಮಗಳಲ್ಲಿ ಹೊಂದುವ ಕುಶಲತೆಯೇ ಯೋಗ, ಮಾಡುವ ಕೆಲಸಗಳನ್ನು ಅತ್ಯಂತ ಕುಶಲತೆಯಿಂದ ನಿರ್ವಹಿಸಬೇಕು ಎಂದು ಉಡುಪಿಯ ಬೀಚ್ ಹೀಲಿಂಗ್ ಹೋಮ್ನ ನಿರ್ದೇಶಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಮೊಹಮ್ಮದ್ ರಫೀಕ್ ಹೇಳಿದರು.
ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ವತಿಯಿಂದ ಮಿಜಾರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡ `ಯೋಗೋತ್ಸವ’ದಲ್ಲಿ ಮಾತನಾಡಿದರು. ಇತ್ತೀಚೆಗೆ ಯೋಗ ವಿಜ್ಞಾನದ ಕುರಿತು ಜನರಲ್ಲಿ ಅರಿವು ಮೂಡುತ್ತಿದೆ. ಇದಕ್ಕೆ ಪೂರಕವಾಗಿ ಯೋಗ ಶಿಕ್ಷಣಕ್ಕೆ ಮಹತ್ವ ನೀಡುವ ಶೈಕ್ಷಣಿಕ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯೋಗ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಅಯೋಜಿಸಿರುವುದರಿಂದ ವಿದ್ಯಾರ್ಥಿಗಳೆಲ್ಲಾ ಸದುಪಯೋಗ ಪಡಿಸಿಕೊಳ್ಳಬೇಕು. ಯೋಗ ಕೇವಲ ಯೋಗಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಪ್ರತಿಯೊಬ್ಬರಿಗೂ ಅನ್ವಯಿಸುವಂತಹದ್ದು. ಯೋಗವೇ ಆರೋಗ್ಯದ ಸೂತ್ರ, ಯೋಗಕ್ಕೆ ಯಾವುದೇ ಜಾತಿ-ಧರ್ಮದ ಅಡ್ಡ ಗೋಡೆ ಇಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಎಸ್ ಶೆಟ್ಟಿ, ಬೆಂಗಳೊರಿನ ಎಚ್ಸಿಜಿ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಮಯೂರ್ ವಿನಯ್ ಕುಮಾರ್ ಕಾಕು, ಮಣಿಪಾಲದ ಕೆಎಂಸಿ ಯೋಗ ಡಿವಿಷನ್ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಕೆ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಜ್ಯೋತಿ ವಂದಿಸಿ, ವಿದ್ಯಾರ್ಥಿನಿ ಶ್ವೇತಾಶ್ರೀ ನಿರೂಪಿಸಿದರು.
ಆಯುಷ್ ಸಚಿವಾಲಯದ ಸಹಯೋಗದಲ್ಲಿ `ಅಂತರಾಷ್ಟ್ರೀಯ ಯೋಗ ದಿನಾಚರಣೆ’ಯ ೧೦೦ ದಿನಗಳ ಪೂರ್ವಭಾವಿಯಾಗಿ ಹಮ್ಮಿಕೊಂಡ `ಯೋಗೋತ್ಸವ’ದಲ್ಲಿ ಭಾಗವಹಿಸುತ್ತಿರುವ ೧೦೦ ಸಂಸ್ಥೆಗಳಲ್ಲಿ ಆಳ್ವಾಸ್ ಸಂಸ್ಥೆಯು ಒಂದು
ಮೂಡುಬಿದಿರೆಯ ಸಾವಿರ ಕಂಬದ ಬಸದಿಯಲ್ಲಿ ಸೂರ್ಯೋದಯ ಕಾಲದಲ್ಲಿ ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ೫೦ ವಿದ್ಯಾರ್ಥಿಗಳು ಯೋಗಭ್ಯಾಸ ನಡೆಸಿದರು.
0 Comments