ಮೂಡುಬಿದಿರೆ : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರದಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದ್ದು ತುಳುವರಿಗೆ ಇದು ನಿಜವಾದ ಹಬ್ಬವಾಗಿದೆ. ಇದರ ನೆನಪಿಗಾಗಿ ಜಿಲ್ಲೆಯಲ್ಲಿ ಪ್ರತೀ ವರ್ಷ ಸೆ.೧೮ರಂದು ತುಳುನಾಡ ಹಬ್ಬದ ದಿನವಾಗಿ ಆಚರಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಅವರು ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಶನಿವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ತುಳುವಿಗೆ ಎರಡನೇ ರಾಜ್ಯಭಾಷೆಯಾಗಿ ಮಾನ್ಯತೆ ಮಾಡಿರುವುದರಿಂದ ಭವಿಷ್ಯದಲ್ಲಿ ತುಳು ಭಾಷೆಯನ್ನು ಎಂಟನೇ ಪರಿಶ್ಚೇಧಕ್ಕೆ ಸೇರಿಸುವ ಪ್ರಯತ್ನಕ್ಕೆ ಇದು ನಾಂದಿಯಾಗಲಿದೆ. ತುಳು ಭಾಷೆ ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಕಾಂಗ್ರೇಸ್ ಕಾರ್ಯಕರ್ತರು ಪ್ರತೀ ಮನೆಗಳು ಮತ್ತು ವ್ಯಾಪಾರಿ ಕೇಂದ್ರಗಳಿಗೆ ತೆರಳಿ ತುಳು ಧ್ವಜ, ಚಿಹ್ನೆಗಳನ್ನು ನೀಡಲಿದ್ದು ಪ್ರತಿಯೊಬ್ಬರು ಇದನ್ನು ತಮ್ಮ ಮನೆಗಳಲ್ಲಿ ಅಳವಡಿಸಬೇಕು ಎಂದು ಅವರು ಮನವಿ ಮಾಡಿದರು.
322 ಚದರ ಕಿ.ಮೀ ವಿಸ್ತೀರ್ಣವಿರುವ ಕರಾವಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಬಜೆಟ್ ಮಂಡಿಸಿ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಸ್ತ ತುಳುವರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳು ಧ್ವಜ ಹಾರಿಸಲು ನಿಲ್ದಾಣದ ಅಧಿಕಾರಿಗಳು ಹಾಗೂ ಸಂಸದ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಸಮಗ್ರ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅದಕ್ಕೆ ಅನುದಾನವನ್ನು ಕಾಯ್ದಿರಿಸಲಾಗಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದರಿಂದ ಭವಿಷ್ಯದಲ್ಲಿ ಕರಾವಳಿಯ ಆರ್ಥಿಕತೆ ಮತ್ತಷ್ಟು ಬೆಳೆಯಲಿದೆ. ಉದ್ಯೋಗವು ಸೃಷ್ಠಿಯಾಗಲಿದೆ ಎಂದರು.
ತಂಬಾ ಮಂದಿ ಮುಖ್ಯಮಂತ್ರಿಗಳಾಗಿ ಬಂದು ಹೋಗಿದ್ದಾರೆ,ಕರಾವಳಿ ಭಾಗದವರೇ ಮುಖ್ಯಮಂತ್ರಿಗಳಾಗಿದ್ದರು,ಆದರೆ ತುಳು ಭಾಷೆಯ ಬಗ್ಗೆ,ತುಳುನಾಡಿನ ಬಗ್ಗೆ,ಇಲ್ಲಿನ ಜನರ ಬಗ್ಗೆ, ಇಲ್ಲಿನ ಸಂಸ್ಕೃತಿಯ ಬಗ್ಗೆ ವಿಶೇಷ ಪ್ರೀತಿ ತೋರಿ ತುಳುಭಾಷೆಗೆ ಮಾನ್ಯತೆ ಕೊಟ್ಟವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದ ಅವರು ತುಳು ಭಾಷೆಗೆ ಹೋರಾಡಿದ ಹಲವಾರು ಪ್ರಮುಖರಿಗೆ,ಸಂಘ ಸಂಸ್ಥೆಗಳಿಗೂ ಕೃತಜ್ಞತೆ ಸಲ್ಲಿಸಿದರು.
*ಮೂಡುಶೆಡ್ಡೆಯಲ್ಲಿ ಹೃದ್ರೋಗ ಮತ್ತು ಕಿದ್ವಾಯಿ ಆಸ್ಪತ್ರೆ :
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಮೂಡುಶೆಡ್ಡೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ.
ಶಾಂಭವಿ ಟೆಕ್ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು ಇದನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸಿಂಗಲ್ ವಿಂಡೋ ಮೂಲಕ ವೇಗ ನೀಡಲಾಗುವುದು.
ಮಂಗಳೂರು ವಾಟರ್ ಮೆಟ್ರೋ, ಮರೈನ್ ವಿವಿ ಸ್ಥಾಪನೆಯೂ ಇಲ್ಲಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರಾದ ಪ್ರವೀಣ್ ಜೈನ್, ಪುರಂದರ ದೇವಾಡಿಗ, ಅನೀಶ್, ಪ್ರವೀಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

0 Comments