ಮೂಡುಬಿದಿರೆ : ವಾರದ ಸಂತೆಯಾಗಿರುವ ಶುಕ್ರವಾರದಂದು ಮೂಡುಬಿದಿರೆಯಲ್ಲಿ ಹಣ್ಣಿನ ಅಂಗಡಿಗಳು, ಫಾಸ್ಟ್ ಫುಡ್ ಸೆಂಟರ್ ಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆರೋಗ್ಯ ಮತ್ತು ಪುರಸಭೆಯ ಅಧಿಕಾರಿಗಳು ಜಂಟಿ ಕಾಯ೯ಚರಣೆ ನಡೆಸಿ ಪರಿಶೀಲನೆ ನಡೆಸಿದರು.
ಆಹಾರ ವಸ್ತುಗಳಲ್ಲಿ ಕಲಬೆರಕೆ ಹಾಗೂ ರಾಸಾಯನಿಕ ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ಬಾಳೆಹಣ್ಣು ಸಹಿತ ವಿವಿಧ ಹಣ್ಣಿನ ಅಂಗಡಿಗಳು, ಆಹಾರ ವಸ್ತುಗಳನ್ನು ತಯಾರಿಸುವ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಮಾದರಿ ಸ್ಯಾಂಪಲ್ ಸಂಗ್ರಹಿಸಿದರು.
ಆಹಾರ ವಸ್ತುಗಳ ಸ್ವಚ್ಛತೆ ಮತ್ತು ಆಹಾರ ಸುರಕ್ಷತೆಯ ಕುರಿತು ಪರಿಶೀಲನೆ ನಡೆಸಿ, ಕೆಲವೆಡೆ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಯಿತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ. ಪ್ರವೀಣ್, ಪುರಸಭೆ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಆರೋಗ್ಯ ನಿರೀಕ್ಷಕ ಖಾದರ್ ಸಾಬ್ ನದಾಫ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.
ಕಳೆದ ವಾರ ಉಡುಪಿ ಜಿಲ್ಲೆಯಲ್ಲಿ ಬಾಳೆಕಾಯಿಯನ್ನು ತ್ವರಿತವಾಗಿ ಹಣ್ಣು ಮಾಡಲು ಕೆಮಿಕಲ್ ಉಪಯೋಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಹಣ್ಣು, ವಾಹನ ಹಾಗೂ ಅಂಗಡಿಗಳನ್ನು ಸೀಜ್ ಮಾಡಿದ್ದರು.

0 Comments