ಮೂಡುಬಿದಿರೆ : ಪಡುಮಾರ್ನಾಡು ಅಚ್ಚರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ (ರಿ ),ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಿಳಾ ಘಟಕ ಅಚ್ಚರಕಟ್ಟೆ ಮತ್ತು ಜ್ಞಾನೋದಯ ಯುವಕ ಸಂಘ ( ರಿ )ಅಚ್ಚರಕಟ್ಟೆ ಆಶ್ರಯದಲ್ಲಿ
ಗ್ರಾಮೀಣ ಸಂಸ್ಕೃತಿಯ ಸೊಬಗು ಮತ್ತು ಪರಂಪರೆಯನ್ನು ನೆನಪಿಸುವ 9 ನೇ ವರ್ಷದ ಕೆಸರ್ ಡೊಂಜಿ ಕಾರ್ಯಕ್ರಮ ಇಲ್ಲಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ಬೇಂಗೂರಿ ಬಾಕಿಮಾರು ಗದ್ದೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಮುಖ ನ್ಯಾಯವಾದಿ ಶಾಂತಿ ಪ್ರಸಾದ್ ಹೆಗ್ಡೆ ಅವರು ಉದ್ಘಾಟಿಸಿ ಮಾತನಾಡಿ ತ್ಯಾಗದ ಸಂಕೇತವಾದ ಕೇಸರಿ ಉಡುಪಿನೊಂದಿಗೆ ಸಮ್ರದ್ಧಿಯ ಸಂಕೇತವಾದ ಹಸಿರು ವಾತಾವರಣದ ಈ ಪರಿಸರದಲ್ಲಿ ಸಾವಯವ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದ್ರಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಇಲ್ಲಿನ ಯುವಕರು ಹಿರಿಯರು ಒಟ್ಟು ಸೇರಿ ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಚ್ಚರಕಟ್ಟೆ ಪಡುಮಾರ್ನಾಡು ಅಧ್ಯಕ್ಷರಾದ ಪಡುಮಾರ್ನಾಡು ಎಂ. ದಯಾನಂದ ಪೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಣ್ಣಿನೊಂದಿಗೆ ಬದುಕಿದವ ಜೀವನದಲ್ಲಿ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ಶಕ್ತನಾಗುತ್ತಾನೆ.ಒಗ್ಗಟ್ಟು,ಶಿಸ್ತು, ಪ್ರೋತ್ಸಾಹ,ಪರೋಪಕಾರ, ಸಹಭೋಜನ ಇವೆಲ್ಲಾ ಭಾರತೀಯ ಸಂಸ್ಕೃತಿಯ ಲಕ್ಷಣಗಳು ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕೃಷಿಯಲ್ಲಿ ಜೀವಮಾನ ವಿಶೇಷ ಸಾಧನೆ ಮಾಡಿದ ಸಾವಯವ ಕೃಷಿಕ ಬಡಕೋಡಿ ರಾಘು ಪೂಜಾರಿಯವರನ್ನು ಶಾಲು, ಹಾರ, ಸ್ಮರಣಿಕೆ, ಹಣ್ಣು ಹಂಪಲು ನೀಡಿ ಹಾರ ಹಾಕಿ ಗೌರವಿಸಲಾಯಿತು.
ಪ್ರಗತಿಪರ ಕೃಷಿಕ ದಯಾನಂದ ಭಟ್ ಅವರು ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು.
ಉದ್ಯಮಿ ತಿಮ್ಮಯ್ಯ ಶೆಟ್ಟಿ,ಬನ್ನಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ ಬಲ್ಲಾಳ್ ಬ್ಲೋಸಮ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಸೈಮನ್ ಮಾಸ್ಕರೆನ್ನಸ್, ಜೈನ್ ಹೈಸ್ಕೂಲ್ ನ ಮುಖ್ಯೋಪಾಧ್ಯಯರಾದ ಶ್ಯಾಮ್ ಪ್ರಸಾದ್ ಭಟ್, ಜ್ಯೋತಿಷಿ ಮತ್ತು ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕರ್ , ಕ್ಷೇತ್ರ ಸಮನ್ವಯ ಅಧಿಕಾರಿ ಸೌಮ್ಯ ಎನ್, ಉದ್ಯಮಿ ಭರತ್ ಶೆಟ್ಟಿ ಅಂಬೂರಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತೀಶ್ ಕರ್ಕೇರ,ನಿವೃತ್ತ ಅಂಚೆಪಾಲಕ ಜಗತ್ಪಾಲ ಜೈನ್, ಪಡುಮಾರ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಷಾ ಚೌಟ, ಸುನಂದಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ ಬಿ. ಅಳಿಯೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಭಟ್ ವಂದಿಸಿದರು.
ಕೆಸರು ಗದ್ದೆಯಲ್ಲಿ ಬಾಲಕ ಬಾಲಕಿಯರು, ಯುವಕ ಯುವತಿಯರು ಹಿರಿಯರುಗಳಿಗೆ ಹಗ್ಗ ಜಗ್ಗಾಟ, ವಾಲಿಬಾಲ್, ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


0 Comments