ಮೂಡುಬಿದಿರೆ: ಮನೆಯ ಕಸವನ್ನು ತಂದು ಸಾವ೯ಜನಿಕ ಸ್ಥಳದಲ್ಲಿ ಸುರಿದ ವ್ಯಕ್ತಿಯನ್ನು ಪತ್ತೆಹಚ್ಚಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಸ ಎಸೆದ ವ್ಯಕ್ತಿಯಿಂದಲೆ ಕಸ ವಿಲೇವಾರಿ ಮಾಡಿಸಿ ರೂ 2 ಸಾವಿರ ದಂಡ ವಿಧಿಸಿದ ಘಟನೆ ಶನಿವಾರ ಪುತ್ತಿಗೆ ಗ್ರಾ. ಪಂ. ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆಯ ಕಾಯರ್ಗುಂಡಿ ಸಾರ್ವಜನಿಕ ಸ್ಥಳದಲ್ಲಿ ಅದೇ ಗ್ರಾಮದ ರುಬಿನಾ ಫೆರ್ನಾಂಡೀಸ್ ಎಂಬವರು ಸಾವ೯ಜನಿಕ ಸ್ಥಳದಲ್ಲಿ ಕಸ ಎಸೆದು ಗಲೀಜು ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರೋರ್ವರು ಪುತ್ತಿಗೆ ಪಿಡಿಒ ಭೀಮಾ ನಾಯಕ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನಾಧರಿಸಿ ಕಸ ಎಸೆದ ಮಹಿಳೆಯನ್ನು ಪತ್ತೆ ಹಚ್ಚಿದ ಅಧಿಕಾರಿ ಅವರಿಂದಲೆ ಕಸವನ್ನು ತೆರವುಗೊಳಿಸಿದ್ದಾರಲ್ಲದೆ ರೂ 2 ಸಾವಿರ ದಂಡ ವಿಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದರಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಪಿಡಿಒ ಅವರು ಮಹಿಳೆಗೆ ಮನವರಿಕೆ ಮಾಡಿದ್ದಾರೆ.
ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ವಿದ್ಯಾಗಿರಿ ಹಂಡೇಲು ರಸ್ತೆಯ ಇಕ್ಕೆಲಗಳಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಕೊಂಡಿದ್ದು ಅದನ್ನು ಪಂಚಾಯತ್ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಳೆದ ಎರಡು ವಾರಗಳ ಹಿಂದೆ ಕ್ಲೀನ್ ಮಾಡಿಸಿತ್ತು.


0 Comments