ಮೂಡುಬಿದಿರೆ: ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ಸಂಜೆ ಮೂಡುಬಿದಿರೆ ವಕೀಲರ ಭವನದಲ್ಲಿ ನಡೆಯಿತು.
ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೆಟ್ ಜನರಲ್ ತಾರಾನಾಥ್ ಪೂಜಾರಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೇವಲ ಮಾತಿನ ಚಾತುರ್ಯ ಸಾಕಾಗುವುದಿಲ್ಲ. ಪ್ರಕರಣದ ಪೂರಕ ಸಾಕ್ಷ್ಯಾಧಾರಗಳ ಸಂಗ್ರಹ, ಸಮರ್ಪಕ ಸಿದ್ಧತೆ, ಪ್ರಾಮಾಣಿಕತೆ ಹಾಗೂ ಪರಿಣಾಮಕಾರಿಯಾಗಿ ವಾದ ಮಂಡಿಸುವ ಸಾಮರ್ಥ್ಯ ಅಗತ್ಯವಿದೆ.ವಕೀಲರು ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು ಎಂದರು.
ಕೇವಲ ಊಹಾತ್ಮಕ ಭಯದ ಆಧಾರದ ಮೇಲೆ ಪ್ರಕರಣ ದಾಖಲಿಸುವುದನ್ನು ತಪ್ಪಿಸಿ, ಸಮರ್ಪಕ ಸಾಕ್ಷ್ಯಾಧಾರಗಳಿದ್ದಾಗ ಮಾತ್ರ ಕಾನೂನು ಹೋರಾಟಕ್ಕೆ ಮುಂದಾಗಬೇಕು.
ಹಿರಿಯ ವಕೀಲರು ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಜ್ಞಾನ ವೃದ್ಧಿಗೆ ಸಹಕರಿಸಬೇಕು. ಕಾನೂನು ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ಸೇರಿದಂತೆ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ಕಾರ್ಯ ನಡೆಯಬೇಕು ಎಂದ ಅವರು ವಕೀಲರು ಆತ್ಮಾವಲೋಕನದೊಂದಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಬಳಿಕ ವಕೀಲರ ಸಂಘದ ವತಿಯಿಂದ ತಾರಾನಾಥ್ ಪೂಜಾರಿಯನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಕೃಷ್ಣರಾಜ್ ಕೆ., ಜೆಎಂಎಫ್ ನ್ಯಾಯಾಲಯದ ಫವಾಝ್ ಪಿ.ಎ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ಟಾ, ಮೂಡುಬಿದಿರೆ ವಕೀಲರ ಸಂಘದ ಸ್ಥಾಪಕ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನಿಕಟ ಪೂರ್ವ ಅಧ್ಯಕ್ಷ ಹರೀಶ್ ಪಿ. ಉಪಸ್ಥಿತರಿದ್ದರು.
ಶಾಂತಿಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಸುಧಾಮಣಿ ಮತ್ತು ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ವಂದಿಸಿದರು.
-----------------
ವಕೀಲರ ಭವನಕ್ಕೆ ರೂ. 1ಲಕ್ಷ ದೇಣಿಗೆ ತಾರನಾಥ ಪೂಜಾರಿ ಘೋಷಣೆ
ವಕೀಲರ ಭವನದ ಮೂಲಸೌಕರ್ಯ ಅಭಿವೃದ್ಧಿಗಾಗಿ ವೈಯಕ್ತಿಕ ನೆಲೆಯಲ್ಲಿ ₹1 ಲಕ್ಷ ದೇಣಿಗೆಯನ್ನು ನೀಡುವುದಾಗಿ ತಾರನಾಥ ಪೂಜಾರಿ ಅವರು ಘೋಷಿಸಿದರು.
--------------------


0 Comments