ಬಪ್ಪನಾಡು ಶ್ರೀ ದುಗಾ೯ಪರಮೇಶ್ವರಿಗೆ ವಿಜೃಂಭಣೆಯ ಶಯನೋತ್ಸವ-ಮಲ್ಲಿಗೆ ರೂಪದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಬಪ್ಪನಾಡು ಶ್ರೀ ದುಗಾ೯ಪರಮೇಶ್ವರಿಗೆ ವಿಜೃಂಭಣೆಯ ಶಯನೋತ್ಸವ-ಮಲ್ಲಿಗೆ ರೂಪದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ

ಮೂಡುಬಿದಿರೆ : ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಶ್ರೀದೇವಿಗೆ ನಡೆದ ಶಯನೋತ್ಸವದಲ್ಲಿ ಮಲ್ಲಿಗೆ ಪ್ರಿಯ ಶ್ರೀದೇವಿಗೆ ಭಕ್ತರಿಂದ  ಲಕ್ಷಕ್ಕಿಂತಲೂ ಮಿಕ್ಕಿ  ಮಲ್ಲಿಗೆ ಸಮರ್ಪಣೆ ಕಾರ್ಯ ನಡೆಯಿತು.


  ಸೋಮವಾರದವರೆಗೆ ಮಲ್ಲಿಗೆ ಅಟ್ಟಿಗೆ 700 ರೂ. ದರ ಇತ್ತು.ಆದರೆ ಮಂಗಳವಾರ ಏಕಾಏಕಿ ಮಲ್ಲಿಗೆ ಅಟ್ಟಿದರ 1,400 ರೂ. ಆಗಿತ್ತು. ಅದರೂ ಭಕ್ತರು ಅಧಿಕ ದರ ತೆತ್ತು ಮಲ್ಲಿಗೆ ಸಮರ್ಪಿಸಿದ್ದಾರೆ. ಅವಿಭಾಜಿತ ದ.ಕ. ಜಿಲ್ಲೆಯಲ್ಲದೆ, ದೂರದ ಬೆಂಗಳೂರು, ಮುಂಬೈನ ಭಕ್ತರೂ ಬಪ್ಪನಾಡು ದುರ್ಗೆಗೆ ಮಲ್ಲಿಗೆ ಸಮರ್ಪಿಸಿದ್ದಾರೆ.

ಭಕ್ತರು ಸಮರ್ಪಿಸಿದ ಮಲ್ಲಿಗೆಗಳನ್ನು ಒಳಾಂಗಣದ ಪ್ರಾಂಗಣದಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗುತ್ತದೆ. ರಾತ್ರಿ ಪೂಜೆಯ ಬಳಿಕ ಮಲ್ಲಿಗೆಯನ್ನು ಗರ್ಭಗುಡಿಯೊಳಗೆ ದೇವಿಯ ಸುತ್ತಲೂ ಇರಿಸಿ ಇಡೀ ದೇವಿಯ ಆವಾಸಸ್ಥಾನ ಮಲ್ಲಿಗೆಯ ಮಲ್ಲಿಗೆಯಿಂದ ತುಂಬಿ ಬಿಡುತ್ತದೆ. 

ಈ ಮಲ್ಲಿಗೆಯ ತಳದಲ್ಲಿ  ದೇವಿಯು ಸುಖ ನಿದ್ದೆಗೆ ಜಾರುತ್ತಾಳೆ ಎಂಬುದು ಭಕ್ತರ ನಂಬಿಕೆ. 

ಇಂದು ಬುಧವಾರ (ಇಂದು)ಪ್ರಾತಃ ಕಾಲ ವಿಶೇಷ ಪೂಜೆ ನಡೆದು ಗರ್ಭಗುಡಿಯ ಬಾಗಿಲು ತೆರೆದು ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು  ಕವಾಟೋದ್ಘಾಟನೆ  ಶ್ರೀದೇವಿಗೆ ವಿಶೇಷ ಪೂಜೆ ನಡೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ಮಲ್ಲಿಗೆ ವಿತರಿಸಲಾಯಿತು 

ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬೆಳಗಿನ ಜಾವ ಪ್ರಸಾದಕ್ಕೆ ಆಗಮಿಸಿದ್ದರು.

ಪ್ರಸಾದ ವಿತರಣೆಗೆ ಕ್ಷೇತ್ರದ ವತಿಯಿಂದ ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಬಿಎಸ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಸಂದರ್ಭ ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು,ಕಾರ್ಯನಿರ್ವಹಣಾಧಿಕಾರಿ ಶ್ವೇತಾ,ಮಾಜೀ ಮೊಕ್ತೇಸರ ಡಾ.ಹರಿಕೃಷ್ಣ ಪುನರೂರು,, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ವರ್ಮ ಮತ್ತಿತರರು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಬುಧವಾರ (ಇಂದು) ರಾತ್ರಿ ಬ್ರಹ್ಮ ರಥೋತ್ಸವ ನಡೆಯಲಿದೆ.

Post a Comment

0 Comments