ಮೂಡುಬಿದಿರೆ : ಪ್ರತಿಭಾನ್ವಿತ ಯಕ್ಷರಂಗ ಕಲಾವಿದ ಸೂರಿಕುಮೇರು ಗೋವಿಂದ ಭಟ್ ವಿಶ್ವರಂಗಭೂಮಿಯ ಪರಿಪೂರ್ಣ ರಾಜ. ಅವರೋರ್ವ ನಿಜ ಅರ್ಥದ ದಶಾವತಾರಿ, ಐಕಾನಿಕ್ ಫಿಗರ್ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಅವರು ಮೂಡುಬಿದಿರೆ ಸಮಾಜಮಂದಿರದಲ್ಲಿ ಮೂಡುಬಿದಿರೆ ಮತ್ತು ಪರಿಸರದ 22 ಯಕ್ಷಕಲಾ ಸಂಘಟನೆಗಳ ಸಹಭಾಗಿತ್ವ ಸಮಾಜ ಮಂದಿರದ ಆಶ್ರಯದಲ್ಲಿ ನಡೆದ ಗೋವಿಂದ ಭಟ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ನುಡಿನಮನ ಸಲ್ಲಿಸಿದರು.
ಕಟ್ಟುವೇಷದಿಂದ ತೊಡಗಿ ನಾಯಕ, ಖಳನಾಯಕ, ಸ್ತ್ರೀ ಸಹಿತ ಎಲ್ಲ ಬಗೆಯ ವೇಷಗಳನ್ನು ಒಂದೇ ರಾತ್ರಿಯಲ್ಲಿ ಮೂರು ನಾಲ್ಕು ಪಾತ್ರಗಳನ್ನು ಸಮರ್ಥವಾಗಿ, ನಿರಾಯಾಸವಾಗಿ ನಿರ್ವಹಿಸುವ ಸಾಮರ್ಥ್ಯದ ಗೋವಿಂದ ಭಟ್ಟರಂಥ ಕಲಾವಿದ ಖಂಡಿತಕ್ಕೂ ಮತ್ತೊಬ್ಬ ಇಲ್ಲ. ರಾಜಕೀಯ ಪರಿಗಣನೆ ಇಲ್ಲದೆ ಪದ್ಮಶ್ರೀ ತಪ್ಪಿ ಹೋಗಿರ ಬಹುದು. ಆದರೆ, ಮಂಗಳೂರು ವಿ.ವಿ. ಗೌರವ ಡಾಕ್ಟರೇಟ್ ನೀಡುವ ನಿರ್ಧಾರ ಪ್ರಕಟಿಸಿರುವುದು ಇದ್ದುದರಲ್ಲಿ ಸಮಾಧಾನಕರ ಅಂಶ ಎಂದರು.
ಗೊಂದಲ ನಿಭಾಯಿಸಬಲ್ಲ ಗೋವಿಂದ ಭಟ್ಟರು ಕೌಟುಂಬಿಕವಾಗಿಯೂ ಸಾರ್ಥಕ ಜೀವನ ನಡೆಸಿದವರು ಎಂದು ಪ್ರಧಾಕರ ಜೋಶಿ ನುಡಿದರು.
ಜೈನ ಮಠಾಧೀಶ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗೋವಿಂದ ಭಟ್ಟರ ಕಲಾಸಾಧನೆ, ವ್ಯಕ್ತಿತ್ವ ಚಿತ್ರಿಸಿದರು.
ಸಮಾಜ ಮಂದಿರ ಸಭಾ ಅಧ್ಯಕ್ಷ ಮಾಜಿ ಸಚಿವ ಕೆ. ' ಅಭಯಚಂದ್ರ, ಉದ್ಯಮಿ ಕೆ. ಶ್ರೀಪತಿ ಭಟ್, ದೀಪ್ತಿ ಬಾಲಕೃಷ್ಣ ಭಟ್ ಅವರು ನುಡಿನಮನ ಸಲ್ಲಿಸಿದರು. ರಾಜಾರಾಮ ನಾಗರಕಟ್ಟೆ ನಿರೂಪಿಸಿದರು.
ಬಳಿಕ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು.


0 Comments