ಅಮರನಾಥ ಶೆಟ್ಟಿ ಟ್ರಸ್ಟ್, ನಕ್ಸಲ್ ವಿರೋಧಿ ಪಡೆಯಿಂದ ಆಯೋಜನೆ
ಮೂಡುಬಿದಿರೆ: ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕರ್ನಾಟಕದ ನಕ್ಸಲ್ ವಿರೋಧಿ ಪಡೆ ಜೊತೆ ಎರಡನೇ ಬಾರಿ ಕೈಜೋಡಿಸಿ ವಿರಾಜಪೇಟೆಯಲ್ಲಿ ಕಾಡು ಕುರುಬ, ಜೇನು ಕುರುಬ, ಸೋಲಿಗ, ಯಾರವ ಹಾಗೂ ಮಲೆ ಕುಡಿಯಾ ಜನಾಂಗಗಳಿಗಾಗಿ ವೈದ್ಯಕೀಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಿತು.
ಕೊಡಗು ಜಿಲ್ಲೆಯ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಶಿಬಿರವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮೇಲ್ವಿಚಾರಣೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕೆ.ಎಸ್. ಹೆಗ್ಡೆ ಮೆಡಿಕಲ್ ಹಾಸ್ಪಿಟಲ್, ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ (ನಿಟ್ಟೆ ವಿಶ್ವವಿದ್ಯಾಲಯ) ಹಾಗೂ ಮಡಿಕೇರಿಯ ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣು ಆಸ್ಪತ್ರೆ ತಾಂತ್ರಿಕ ಸಹಕಾರ ನೀಡಿದವು.
ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಅಮರ್ಶ್ರೀ ಅಮರನಾಥ ಶೆಟ್ಟಿ ಶಿಬಿರದ ಸಂಯೋಜನೆ ಮತ್ತು ಉಸ್ತುವಾರಿ ವಹಿಸಿದ್ದರು.
ಶಿಬಿರದಲ್ಲಿ ನೇತ್ರ ತಜ್ಞ ಡಾ. ಗುರುಪ್ರಸಾದ್, ಚರ್ಮರೋಗ ತಜ್ಞ ಡಾ. ಕುಶಾಲ್, ಮಕ್ಕಳ ದಂತ ವೈದ್ಯೆ ಪ್ರೊ. ಡಾ. ಅಮರ್ಶ್ರೀ ಅಮರನಾಥ ಶೆಟ್ಟಿ, ಸಮುದಾಯ ದಂತ ವೈದ್ಯೆ ಡಾ. ಶಿಲ್ಪಾ ಹಾಗೂ ಮೂಳೆರೋಗ, ಸ್ತ್ರೀರೋಗ, ಕಿವಿ-ಮೂಗು-ಗಂಟಲು ತಜ್ಞರು ಸೇರಿದಂತೆ ಸುಮಾರು 50 ವೈದ್ಯರ ತಂಡ ಪಾಲ್ಗೊಂಡಿತ್ತು.
ಶಿಬಿರದಲ್ಲಿ ಒಟ್ಟು 276 ಜನರನ್ನು ತಪಾಸಣೆಗೊಳಪಡಿಸಲಾಗಿದ್ದು, ಅಗತ್ಯವಿದ್ದವರಿಗೆ ಬಿಪಿ ಹಾಗೂ ಇಸಿಜಿ ಪರೀಕ್ಷೆಗಳನ್ನು ನಡೆಸಲಾಯಿತು. ಉಚಿತ ದಂತ ಚಿಕಿತ್ಸೆಯ ಜೊತೆಗೆ, 69 ಮಂದಿಗೆ ಉಚಿತ ಕನ್ನಡಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ 6 ಮಂದಿಗೆ ಉಚಿತವಾಗಿ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆ ಮಾಡಲು ಯೋಜಿಸಲಾಗಿದೆ. ಕರ್ನಾಟಕದ ಆಂಟಿ ನಕ್ಸಲ್ ಫೋರ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.


0 Comments